ರಾಮ ಮಂದಿರ ನಿರ್ಮಾಣ : ‘ಎನ್ಡಿಎ ಕಾರ್ಯಸೂಚಿಗೆ ಬಿಜೆಪಿ ಬದ್ಧ’
ಬೆಂಗಳೂರು : ಆಯೋಧ್ಯೆ ರಾಮಮಂದಿರ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಥಪೂರ್ಣ ಹಾಗೂ ಸರ್ವಸಮ್ಮತವಾದ ತೀರ್ಮಾನಕ್ಕೆ ಬರುವ ಪ್ರಯತ್ನಗಳು ಸಾಗಿವೆ. ಒಂದೊಮ್ಮೆ ಮಾರ್ಚ್ 15ರೊಳಗೆ ಯಾವುದೇ ತೀರ್ಮಾನಕ್ಕೆ ಬರಲಾಗದಿದ್ದರೆ, ಆಗ ಎಲ್ಲವೂ ಕಾನೂನಿನಂತೆಯೇ ನಡೆಯುತ್ತದೆ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ.
ವಿಶ್ವಹಿಂದೂ ಪರಿಷತ್ ಮಾರ್ಚ್ 15ರ ಬಳಿಕ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಿಸುವುದಾಗಿ ಘೋಷಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ರಾಮಮಂದಿರ ನಿರ್ಮಾಣ ವಿಷಯದಲ್ಲಿ ಭಾರತೀಯ ಜನತಾಪಕ್ಷವು ಎನ್.ಡಿ.ಎ. ಕಾರ್ಯಸೂಚಿಗೆ ಬದ್ಧವಾಗಿದೆ ಎಂದು ತಿಳಿಸಿದರು.
ಈಗಾಗಲೇ ವಿಶ್ವಹಿಂದೂ ಪರಿಷತ್ ನಾಯಕರಿಗೆ ಸರಕಾರಕ್ಕೆ ಇರುವ ಇತಿಮಿತಿಗಳ ಬಗ್ಗೆ ವಿವರಿಸಲಾಗಿದೆ. ಮಂದಿರ ನಿರ್ಮಾಣ ವಿಷಯದಲ್ಲಿ ಯಾವುದೇ ಕಠಿಣ ನಿರ್ಧಾರ ಕೈಗೊಳ್ಳದಂತೆ ತಿಳಿಸಲಾಗಿದೆ ಎಂದು ನಾಯ್ಡು ಹೇಳಿದರು.
ವಿಶ್ವಹಿಂದೂ ಪರಿಷತ್ ಒಂದು ಸ್ವತಂತ್ರ ಸಂಸ್ಥೆ. ಅದೊಂದು ಧಾರ್ಮಿಕ ಸಂಘಟನೆ. ಆ ಸಂಘಟನೆಗೆ ತನ್ನದೇ ಆದ ಒಂದು ಕಾರ್ಯಸೂಚಿ ಇದೆ. ಸದಸ್ಯರು ಅದನ್ನೇ ಅನುಸರಿಸುತ್ತಾರೆ. ನಮಗೂ ಒಂದು ಕಾರ್ಯಸೂಚಿ ಇದೆ. ನಾವು ಎನ್ಡಿಎ ಕಾರ್ಯಸೂಚಿಗೆ ಬದ್ಧರಾಗಿದ್ದೇವೆ ಎಂದು ನಾಯ್ಡು ವಿವರಿಸಿದರು.
ಭಾರತೀಯ ಜನತಾಪಕ್ಷವು ಎನ್ಡಿಎ ನೇತೃತ್ವದ ಸಮ್ಮಿಶ್ರಸರಕಾರದ ಭಾಗವಾಗಿದೆ. ಹೀಗಾಗಿ ನಾವು ಸಮ್ಮಿಶ್ರ ಧರ್ಮವನ್ನು ಪಾಲಿಸಲೇ ಬೇಕು ಎಂದ ಅವರು, ವಿಎಚ್ಪಿ ಯ ಮನವೊಲಿಸುವ ಪ್ರಯತ್ನಗಳು ಇನ್ನೂ ಚಾಲನೆಯಲ್ಲಿವೆ ಎಂದು ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...