‘ದೇವೇಗೌಡರೇನಾದರೂ ಗೆದ್ದರೆ, ರಾಜ್ಯ- ಕೇಂದ್ರ ಸರ್ಕಾರಗಳು ಅಲ್ಲಾಡುತ್ತವೆ’
ಬೆಂಗಳೂರು : ಕನಕಪುರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಆಯ್ಕೆಯಾದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸ್ಥಿರವಾಗುತ್ತವೆ. ಇದನ್ನು ತಡೆಯಬೇಕು ಎಂದು ಆರ್ಥಶಾಸ್ತ್ರಜ್ಞ ಕೆ.ವೆಂಕಟಗಿರಿ ಗೌಡ ಅಭಿಪ್ರಾಯ ಪಟ್ಟಿದ್ದಾರೆ.
ಗುರುವಾರ ಅವರು ಸುದ್ದಿಗಾರರೊಡನೆ ಮಾತಾಡುತ್ತಿದ್ದರು. ದೇಶಕ್ಕೆ ಹಾಗೂ ನಾಡಿಗೆ ದೇವೇಗೌಡರ ಕೊಡುಗೆ ಏನು ಹೇಳಿ? ತಮ್ಮ ವಿರುದ್ಧದ ಆರೋಪಗಳಿಂದ ಅವರು ಇನ್ನೂ ಮುಕ್ತರಾಗಿಲ್ಲ . ಕಪ್ಪು ಆಸ್ತಿ ಸಂಪಾದನೆ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ತಮಗೆ ಬೇಕಾದವರಿಗೆ ಅಕ್ರಮ ಗುತ್ತಿಗೆ ಕೊಟ್ಟಿರುವುದು, ಮಕ್ಕಳು ಮತ್ತು ಅಳಿಯಂದಿರ ಮಾಲಿಕತ್ವದ ಭವ್ಯ ಹಾಗೂ ದಿವ್ಯ ಕಟ್ಟಡಗಳು ಮೊದಲಾದ ಆರೋಪಗಳು ಸುಳ್ಳೆಂದು ರುಜುವಾತಾಗಿಲ್ಲ. ಒ-ಬ್ಬ ಬಡ ರೈತ ದೇವೇಗೌಡ ಇವತ್ತು ಸಾವಿರಾರು ಕೋಟಿ ರುಪಾಯಿಗಳ ಆಸ್ತಿ ಮಾಡಿರುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಯಾವುದೇ ಸ್ವಾಗತಾರ್ಹ ಪರ್ಯಾಯಗಳಿಲ್ಲದ ಕಾರಣ ಪ್ರಧಾನಿ ಗಾದಿಗೇರಿದ ಗೌಡರು, ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟಿಸಿದರು. 10 ತಿಂಗಳ ಅವಧಿಯ ಪ್ರಧಾನಿಗಿರಿಯಲ್ಲಿ ಕರ್ನಾಟಕದ ಪಟೇಲರ ಸರ್ಕಾರವನ್ನು ಬಲಹೀನವನ್ನಾಗಿಸುವುದರಲ್ಲೇ ನಿರತರಾದರು ಎಂದು ವೆಂಕಟಗಿರಿ ಗೌಡ ಟೀಕಿಸಿದರು.