ದೇಶ ಸುರಕ್ಷಿತ ; ನನಗೆ ಕಾಂಗ್ರೆಸ್ ಭವಿಷ್ಯದ್ದೇ ಚಿಂತೆ- ವಾಜಪೇಯಿ
ನವದೆಹಲಿ : ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ವಾಜಪೇಯಿ- ತಮಗೆ ದೇಶದ ಬಗ್ಗೆ ಚಿಂತೆಯಿಲ್ಲ , ಆದರೆ ಮುಳುಗುತ್ತಿರುವ ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಚಿಂತೆಯಾಗಿದೆ ಎಂದು ಕಟಕಿಯಾಡಿದ್ದಾರೆ.
ಚುನಾವಣಾ ಸಭೆಯಾಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವಾಜಪೇಯಿ, ಕಾಂಗ್ರೆಸ್ ಹಾಗೂ ಸೋನಿಯಾ ವಿರುದ್ಧ ನಿಶಿತ ಟೀಕಾಸ್ತ್ರ ಪ್ರಯೋಗಿಸಿದರು. ಸೋನಿಯಾ ಅವರು ಮಹಿಳೆ ಹಾಗೂ ವಿದೇಶಿ ಮಹಿಳೆ. ಅವರ ಬಗ್ಗೆ ಗೌರವ ಇರುವುದು ಸ್ವಾಭಾವಿಕ. ಆದರೆ, ಅವರ ಮಾತುಗಳು ತಮ್ಮನ್ನು ತೀವ್ರವಾಗಿ ಘಾಸಿಗೊಳಿಸಿರುವುದಾಗಿ ಪ್ರಧಾನಿ ಹೇಳಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ದೇಶದ ಭವಿಷ್ಯದ ಬಗ್ಗೆ ನಾನು ಯೋಚಿಸಬೇಕಾಗಿಲ್ಲ . ಅದು ಸುರಕ್ಷಿತ ಹಾಗೂ ಉಜ್ವಲವಾಗಿದೆ. ಆದರೆ, ಕಾಂಗ್ರೆಸ್ ಪಕ್ಷದ ಭವಿಷ್ಯತ್ತಿನ ಬಗೆಗೆ ತಮಗೆ ಆತಂಕವಾಗಿದೆ ಎಂದು ವಾಜಪೇಯಿ ವ್ಯಂಗ್ಯವಾಡಿದರು.
ಕಾರ್ಗಿಲ್ ಯುದ್ಧಕ್ಕಾಗಿ ಖರೀದಿಸಿದ ಶವ ಪೆಟ್ಟಿಗೆ ಅವ್ಯವಹಾರಗಳ ಆರೋಪದ ಗೂಬೆಯನ್ನು ಸರ್ಕಾರದ ಮೇಲೆ ಹೊರಿಸುತ್ತಿರುವ ಕಾಂಗ್ರೆಸ್, ಈ ವಿಷಯವನ್ನು ಚುನಾವಣಾ ವಿಷಯವಾಗಿ ಪರಿವರ್ತಿಸಿದೆ. ಆದರೆ, ಈ ವಿಷಯ ನಮ್ಮ ಯೋಧರ ನೈತಿಕ ಬಲವನ್ನು ಕುಗ್ಗಿಸುತ್ತದೆ ಎಂದು ಪ್ರಧಾನಿ ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್ನ ಪ್ರಚಾರ ನೀತಿಯನ್ನು ಕೆಟ್ಟ ನಡವಳಿಕೆ ಹಾಗೂ ಕೊಳಕು ರಾಜಕಾರಣ ಎಂದು ಅವರು ಬಣ್ಣಿಸಿದರು.
ಕಾರ್ಗಿಲ್ ಶವ ಪೆಟ್ಟಿಗೆ ಹಗರಣದ ಕುರಿತು ಸರ್ಕಾರ ಏನನ್ನೂ ಮುಚ್ಚಿಟ್ಟಿಲ್ಲ , ಮುಚ್ಚಿಡಲು ಬಯಸುವುದೂ ಇಲ್ಲ . ಆದರೆ, ವಿಚಾರಣೆಗೆ ಮುನ್ನವೇ ಈ ರೀತಿ ಬಹಿರಂಗ ಆರೋಪ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ ವಾಜಪೇಯಿ, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ದೇಶಪ್ರೇಮಿ ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...