ಶಿವಮೊಗ್ಗದಲ್ಲಿ ನಮ್ಟೀಮ್ ವತಿಯಿಂದ ರಂಗ ಸುಗ್ಗಿ ನಾಟಕ ಸಪ್ತಾಹ
ಶಿವಮೊಗ್ಗ : ಇಲ್ಲಿನ ‘ನಮ್ ಟೀಮ್’ ವತಿಯಿಂದ ಕುವೆಂಪು ರಂಗ ಮಂದಿರದಲ್ಲಿ ರಂಗ ಸುಗ್ಗಿ ಎನ್ನುವ ನಾಟಕ ಸಪ್ತಾಹ ಮಂಗಳವಾರ ಆರಂಭವಾಯಿತು.
ಪತ್ರಕರ್ತ ಅನ್ವರ್ ಸ್ಮರಣಾರ್ಥ ಆಯೋಜಿಸಲಾಗಿರುವ ಈ ನಾಟಕ ಸಪ್ತಾಹವನ್ನು ಮೂಡಬಿದಿರೆ ಜೈನ ಕಾಶಿ ಮಠದ ಭಾರತಭೂಷಣ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಸಮೃದ್ಧಿ ಮತ್ತು ವಿಜ್ಞಾನದಿಂದ ನೆಮ್ಮದಿ ಲಭಿಸುತ್ತದೆ. ನಾಟಕ ನಮ್ಮ ಮನಸ್ಸನ್ನು ಆವರಿಸಿಕೊಳ್ಳಬಲ್ಲ ಕಲೆಯಾಗಿದೆ. ಇಂತಹ ಕಲೆಯು ಮಲೆನಾಡಿನ ಪರಿಸರದಲ್ಲಿ ಸಮೃದ್ಧವಾಗಿ ಬೆಳೆದು ಬರುತ್ತಿರುವುದು ತಮಗೆ ಸಂತೋಷ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನ ನಾಥ ಸ್ವಾಮೀಜಿ ಜೈನ ಕಾಶಿ ಸ್ವಾಮೀಜಿಗಳ ಮಾತನ್ನು ಬೆಂಬಲಿಸಿ, ನಾಟಕವು ವಾಸ್ತವತೆಯ ವಿವಿಧ ರೂಪಗಳನ್ನು ನಮಗೆ ಪರಿಚಯಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ವಿಜಯ ಕರ್ನಾಟಕ ಪತ್ರಿಕೆಯ ಕಾರ್ಯ ನಿರ್ವಾಹಕ ವ್ಯವಸ್ಥಾಪಕ ಸಂಪಾದಕ ವಿಶ್ವೇಶ್ವರ ಭಟ್, ಪತ್ರಿಕೋದ್ಯಮದ ಈ ಸಂಕ್ರಮಣ ಕಾಲದಲ್ಲಿ ವೃತ್ತಿಯ ಮೌಲ್ಯ ಹಾಗೂ ಘನತೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ಇಂದಿನ ಪತ್ರಕರ್ತರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...