ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಅಭಿವೃದ್ಧಿ : ಕೇಂದ್ರ ಸಚಿವರೊಂದಿಗೆ ಕೃಷ್ಣರ ಬಜೆಟ್‌ಪೂರ್ವ ಮಾತುಕತೆ

By Staff
|
Google Oneindia Kannada News

ನವದೆಹಲಿ : ರೈಲ್ವೆ ಯೋಜನೆ, ಪ್ರವಾಸೋದ್ಯಮ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಕೇಂದ್ರ ಸಚಿವರುಗಳೊಂದಿಗೆ ಬಜೆಟ್‌ ಪೂರ್ವ ಮಾತುಕತೆ ನಡೆಸಿದ್ದಾರೆ. ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿಗಳು ಮಂಗಳವಾರ ಕೇಂದ್ರ ಪ್ರವಾಸೋದ್ಯಮ ಸಚಿವ ಜಗಮೋಹನ್‌, ರೈಲ್ವೆ ಸಚಿವ ನಿತೀಶ್‌ ಕುಮಾರ್‌ ಮೊದಲಾದವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ರೈಲ್ವೆ ಸಚಿವ ನಿತೀಶ್‌ ಕುಮಾರ್‌ ಅವರೊಂದಿಗೆ ಮೊದಲು ಮಾತುಕತೆ ನಡೆಸಿದ ಕೃಷ್ಣ ಅವರು, ರಾಜ್ಯಕ್ಕೆ ಕೇಂದ್ರ ರೈಲ್ವೆ ತಂಡವನ್ನು ಕಳುಹಿಸಿ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಮತ್ತು, ರೈಲ್ವೆ ಮುಂಗಡ ಪತ್ರದಲ್ಲಿ ರಾಜ್ಯಕ್ಕೆ ಹಣ ಮೀಸಲಿಡುವಂತೆ ಕೋರಿದರು.

ಶಿವಮೊಗ್ಗ -ತಾಳಗುಪ್ಪ, ಬೆಂಗಳೂರು-ಮೈಸೂರು, ರಾಮನಗರ ಮಾರ್ಗಗಳನ್ನು ಡಬಲ್‌ ಟ್ರಾಕ್‌ ಮಾಡುವ ಹಾಗೂ ಚಾಮರಾಜನಗರ ರೈಲು ಮಾರ್ಗಗಳ ಬಗ್ಗೆ ಕೂಡ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದರು. ಆನಂತರ ಕೇಂದ್ರ ಪ್ರವಾಸೋದ್ಯಮ ಸಚಿವ ಜಗಮೋಹನ್‌ ಅವರನ್ನು ಭೇಟಿ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿದರು.

ಪ್ಯಾಲೇಸ್‌ ಅನ್‌ ವ್ಹೀಲ್‌ : ರಾಜ ಮಹಾರಾಜರ ವೈಭವ ಬಿಂಬಿಸುವ ಹಾಗೂ ಪ್ರವಾಸೋದ್ಯಮದ ಆಕರ್ಷಣೆಗಳಲ್ಲೊಂದಾದ ‘ಪ್ಯಾಲೇಸ್‌ ಆನ್‌ ವ್ಹೀಲ್ಸ್‌ ’ ಅರ್ಥಾತ್‌ ರೈಲಿನ ಗಾಲಿಯ ಮೇಲೆ ಸಂಚರಿಸುವ ಅರಮನೆ ಯೋಜನೆ ಕರ್ನಾಟಕದ ಪಾಲಿಗೆ ನನಸಾಗುವ ಸೂಚನೆ ಈ ಸಂದರ್ಭದಲ್ಲಿ ಸಿಕ್ಕಿತು.

ಮಾತುಕತೆಯ ಫಲಶ್ರುತಿಯಾಗಿ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ 30 ಕೋಟಿ ರುಪಾಯಿಗಳ ಈ ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ಯ ಸರಕಾರವು ಮಾರ್ಚ್‌ ಮೊದಲವಾರದಲ್ಲಿ ರೈಲ್ವೆ ಹಾಗೂ ಪ್ರವಾಸೋದ್ಯಮ ನಿಗಮದ ಜೊತೆ ಒಪ್ಪಂದಕ್ಕೆ ಅಂಕಿತ ಹಾಕಲಿದೆ. ವಾಸ್ತವವಾಗಿ ಕಳೆದ ವರ್ಷದ ಮುಂಗಡಪತ್ರದಲ್ಲೇ ಈ ಯೋಜನೆ ಪ್ರಕಟಿಸಲಾಗಿತ್ತಾದರೂ, ಅದಕ್ಕೆ ಚಾಲನೆ ದೊರೆತಿರಲಿಲ್ಲ.

ಹಂಪಿ ಅಭಿವೃದ್ಧಿಗೆ ಕ್ರಮ : ಈ ಮಧ್ಯೆ ವಿಶ್ವಪರಂಪರೆಯ ಹಂಪಿ ಅಭಿವೃದ್ಧಿಯ ಭರವಸೆ ಕೂಡ ಕೇಂದ್ರ ಸಚಿವರಿಂದ ದೊರೆಯಿತು. ಈ ತಿಂಗಳ 19 ಹಾಗೂ 20ರಂದು ತಾವೇ ಖುದ್ದಾಗಿ ಎರಡು ದಿನಗಳ ಕಾಲ ಕರ್ನಾಟಕಕ್ಕೆ ಭೇಟಿ ನೀಡಿ, ಪ್ರವಾಸ ಕೈಗೊಂಡು ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಮುಖ್ಯಮಂತ್ರಿಗಳಿಗೆ ಆಶ್ವಾಸನೆ ನೀಡಿದರು.

ರಾಜ್ಯ ಸರಕಾರವು ಹಂಪಿಯ ಸಮಗ್ರ ಅಭಿವೃದ್ಧಿಗೆ 30.64 ಕೋಟಿ ಹಾಗೂ ಬಾದಾಮಿ, ಪಟ್ಟದಕಲ್ಲು, ಐಹೊಳೆ ಅಭಿವೃದ್ಧಿಗೆ 3.2 ಕೋಟಿ ರುಪಾಯಿಗಳ ಯೋಜನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಜೋಗದ ಅಭಿವೃದ್ಧಿಯ ಕುರಿತೂ ಯೋಜನೆಯಾಂದನ್ನು ಸಲ್ಲಿಸಲಾಗಿದೆ. ಕೇಂದ್ರ ಸಚಿವರು ಕರ್ನಾಟಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಈ ಯೋಜನೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಒಂದು ಮಾಹಿತಿ : ಐ.ಟಿ.ಯಲ್ಲಿ ಮುಂದಿರುವ ಕರ್ನಾಟಕ ಈ ಹೊತ್ತು ದಕ್ಷಿಣಭಾರತದ ರಾಜ್ಯಗಳ ಪೈಕಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಿಂದೆ ಬಿದ್ದಿದೆ. ಅಧ್ಯಯನ ಒಂದರ ರೀತ್ಯ ಭಾರತಕ್ಕೆ ಬರುವ ಪ್ರವಾಸಿಗರ ಪೈಕಿ ಶೇ21ರಷ್ಟು ಮಂದಿ ದಕ್ಷಿಣ ಭಾರತಕ್ಕೆ ಬರುತ್ತಾರೆ.

ಈ ಪೈಕಿ ಶೇ.60ರಷ್ಟು ಮಂದಿಯನ್ನು ದೇಗುಲಗಳ ತವರಾದ ತಮಿಳುನಾಡು ಆಕರ್ಷಿಸಿದೆ. ಶಿಲ್ಪಕಲೆಯಿಂದ ಶ್ರೀಮಂತವಾದ ಕರ್ನಾಟಕಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕೇವಲ ಶೇ.7. ಪ್ರವಾಸಿಗರಿಗೆ ಕರ್ನಾಟಕ ಬೇಡವಾಯ್ತೆ?

(ಇನ್‌ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X