ಮೇಲು ಕೋಟೆಯಿಂದ ದಾಸರ ನುಡಿ ಹೊತ್ತೊಯ್ಯಲಿರುವ ಪುರಂದರ ಜ್ಯೋತಿ
ಬೆಂಗಳೂರು: ಮೇಲುಕೋಟೆ ಪುರಂದರ ದಾಸರ ಆರಾಧನಾ ಸಮಿತಿ ಆಯೋಜಿಸಿರುವ ಆರಾಧನೋತ್ಸವದ ಜ್ಯೋತಿಯು ಫೆಬ್ರವರಿ 7ರಂದು ಮೇಲು ಕೋಟೆಯಿಂದ ಹೊರಟು ಫೆಬ್ರವರಿ 10ರಂದು ಮುಳಬಾಗಿಲು ಸೇರಲಿದೆ.
ಪುರಂದರದಾಸರ ಆರಾಧನಾ ಸಮಿತಿ ಟ್ರಸ್ಟ್ನ ಅಧ್ಯಕ್ಷ ಆರ್. ಆರ್. ಕೇಶವ ಮೂರ್ತಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮೇಲುಕೋಟೆಯಿಂದ ಹೊರಡುವ ಪುರಂದರ ಜ್ಯೋತಿಯು ಪಾಂಡವಪುರ , ಶ್ರೀರಂಗ ಪಟ್ಟಣ ಮತ್ತು ಮೈಸೂರಿನ ಮೂಲಕ ಫೆಬ್ರವರಿ 8ರಂದು ಮಂಡ್ಯ, ಮಳೂರು, ಅಬ್ಬೂರು, ಚನ್ನಪಟ್ಟಣ, ರಾಮನಗರ, ಕೆಂಗೇರಿಯನ್ನು ಸುತ್ತಿ ಬೆಂಗಳೂರು ತಲುಪಲಿದೆ. ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿದ ಬಳಿಕ ಕೋಲಾರ ಮಾರ್ಗವಾಗಿ ಫೆಬ್ರವರಿ 10ರಂದು ಮುಳಬಾಗಿಲು ತಲುಪಲಿದೆ.
ಚೆಲುವ ನಾರಾಯಣ ಸ್ವಾಮಿಯ ಮೇಲುಕೋಟೆಯ ಕದಲಗೆರೆ ಗ್ರಾಮದಲ್ಲಿ ಪುರಂದರ ದಾಸರಿಗೆ ದರ್ಶನ ನೀಡಿರುವುದಾಗಿ ಪ್ರತೀತಿ ಇದೆ. ಆದ್ದರಿಂದ ಆರಾಧನೋತ್ಸವ ಜ್ಯೋತಿಯು ಮೇಲುಕೋಟೆಯಿಂದ ಹೊರಡಲಿದೆ ಎಂದು ಕೇಶವ ಮೂರ್ತಿ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...