ಬಿಜಾಪುರ ಜಿಲ್ಲೆಯ ಇಂಡಿ ವಲಯ ನಾಲೆಗೆ ಫೆಬ್ರವರಿ 6ರಂದು ನೀರು
ಬೆಂಗಳೂರು : ರೈತರ ಬಹು ದಿನಗಳ ಕನಸಾದ ಇಂಡಿ ವಲಯದ ನಾಲೆಗೆ ಫೆಬ್ರವರಿ 6ರಂದು ನೀರು ತುಂಬಲಿದೆ. 85 ಕಿ.ಮೀ.ಯಿಂದ 133 ಕಿ.ಮೀವರೆಗೆ ನೀರು ಹರಿಸುವುದಾಗಿ ಕರ್ನಾಟಕ ಜಲ ಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದರಿಂದ ಬಿಜಾಪುರ ಜಿಲ್ಲೆಯ ಇಂಡಿ ಹಾಗೂ ಸಿಂ-ಧ-ಗಿ ಪಟ್ಟಣಗಳ ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಇಂಡಿ ನಾಲೆಯ ಉದ್ದವನ್ನು 172 ಕಿ.ಮೀ.ವರೆಗೆ ವಿಸ್ತರಿಸುವ ಕಾಮಗಾರಿ ಭರದಿಂದ ಸಾಗಿದ್ದು, ಬರುವ ಜೂನ್ ಹೊತ್ತಿಗೆ ಕೆಲಸ ಮುಗಿಯಲಿದೆ. ಈ ಕಾಮಗಾರಿ ಪೂರ್ಣವಾದ ನಂತರ 1,29,619 ಹೆಕ್ಟೇರ್ ಹೆಚ್ಚುವರಿ ಜಾಗೆಗೆ ನೀರಾವರಿ ಸೌಕರ್ಯ ಲಭ್ಯವಾಗಲಿದೆ ಎಂದು ಪಾಟೀಲ್ ಹೇಳಿದರು.
ಗುಲ್ಬರ್ಗಾದ ಸುರಪುರ ಮತ್ತು ಜೇವರ್ಗಿ ಯೋಜನೆ ಹಾಗೂ ಬಿಜಾಪುರದ ಸಿಂ-ಧ-ಗಿ ಮತ್ತು ಇಂಡಿ ಯೋಜನೆಯಿಂದ 10 ಸಾವಿರಕ್ಕೂ ಹೆಚ್ಚು ರೈತರಿಗೆ ಬೇಸಾಯಕ್ಕೆ ನೀರು ದೊರೆಯಲಿದೆ. ಈ ಯೋಜನೆಗಳ ಅಂದಾಜು ವೆಚ್ಚ 1170.02 ಕೋಟಿ ರುಪಾಯಿ. ಈಗಾಗಲೇ 1033.56 ಕೋಟಿ ರುಪಾಯಿಯನ್ನು ಯೋಜನೆಗಾಗಿ ವಿನಿಯೋಗಿಸಲಾಗಿದೆ ಎಂದರು.
ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ : ಕಾವೇರಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ವಿಶೇಷ ನ್ಯಾಯ ಮಂಡಳಿ ರಚನೆಯನ್ನು ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ನೀರಾವರಿ ಮತ್ತು ಕಾನೂನು ತಜ್ಞರ ಜೊತೆ ಈ ವಿಷಯದ ಬಗೆಗೆ ಚರ್ಚಿಸಿದ್ದೇನೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸುಪ್ರಿಂಕೋರ್ಟ್ಗೆ ಸಲ್ಲಿಸಬೇಕಿರುವ ಅಫಿಡವಿಟ್ನ ತಿರುಳು ಹೇಗಿರಬೇಕೆಂಬುದರ ಬಗೆಗೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂಬಂಧ ಫೆಬ್ರವರಿ 7ರೊಳಗೆ ಅಫಿಡವಿಟ್ ಸಲ್ಲಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸುಪ್ರಿಂಕೋರ್ಟ್ ಆದೇಶ ನೀಡಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...