ಬೆಂಗ್ಳೂರು ದೂರದರ್ಶನದ ಕಮಲಾ ಹೆಮ್ಮಿಗೆ ಸೇರಿ 7ಅಧಿಕಾರಿಗಳಿಗೆ ಜೈಲು
ಬೆಂಗಳೂರು : ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಕಳೆದ ವರ್ಷ ಸಿಬಿಐ 11 ಮಂದಿ ಅಧಿಕಾರಿಗಳ ವಿರುದ್ಧ ದಾಖಲಿಸಿಕೊಂಡಿದ್ದ ದೂರಿನ ಬಗ್ಗೆ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯವು ಬೆಂಗಳೂರು ದೂರದರ್ಶನದ ಕಮಲಾ ಹೆಮ್ಮಿಗೆ, ಕೋಲಾರ ಚಿನ್ನದ ಗಣಿಯ ಅಜೀಜ್ ಮಹಮ್ಮದ್ ಸೇರಿದಂತೆ ಏಳು ಅಧಿಕಾರಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಕ್ರಿಮಿನಲ್ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಿಗೆ ಒಂದರಿಂದ ಮೂರು ವರ್ಷಗಳ ವರೆಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ಈ ವಿಷಯವನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ.ಎನ್. ದಿಲೀಪ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ದೂರದರ್ಶನದ ಕಾರ್ಯಕ್ರಮದ ನಿರ್ವಾಹಕಿ ಕಮಲಾ ಹೆಮ್ಮಿಗೆ, ಕೋಲಾರ ಚಿನ್ನದಗಣಿಯ ಉಪ ಆಪ್ತ ವ್ಯವಸ್ಥಾಪಕ ಅಜೀಜ್ ಮಹಮ್ಮದ್, ಬೆಂಗಳೂರು ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಾಂದರ ವ್ಯವಸ್ಥಾಪಕರಾಗಿದ್ದ ಕೆ.ಆರ್. ಚೌಡಪ್ಪ, ಎಚ್.ಎ.ಎಲ್. ವ್ಯವಸ್ಥಾಪಕರಾಗಿದ್ದ ಚಂದ್ರಭೂಷಣರಾವ್, ಎನ್ಐಎಸಿಯ ಸಹಾಯಕ ಆಡಳಿತಾಧಿಕಾರಿ ಟಿ. ಮಹೇಂದ್ರನ್, ಆರ್.ಪಿ.ಎಫ್.ಸಿಯ ಜಾರಿ ಅಧಿಕಾರಿ ಎ.ಆರ್. ಶಾಂತಕುಮಾರಿ ಹಾಗೂ ದೂರಸಂಪರ್ಕ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎನ್.ಕೆ. ಗುಪ್ತಾ ಅವರಿಗೆ ನ್ಯಾಯಾಲಯವು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಒಟ್ಟು 24 ಪ್ರಕರಣಗಳಲ್ಲಿ ತನಿಖೆ ನಡೆಸಿದ ಸಿಬಿಐ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ನಿಗದಿತ ವರಮಾನಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಎಚ್ಎಎಲ್, ಬಿಎಚ್ಇಎಲ್ ಹಾಗೂ ಬಿಎಸ್ಎನ್ಎಲ್ನ ಕೆಲವು ಹಿರಿಯ ಅಧಿಕಾರಿಗಳ ವಿರುದ್ಧವೂ ಸಿಬಿಐ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...