ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೂನ್ಯ ಫಲಶೃತಿಯ ವಿಧಾನಮಂಡಲದ ಕಲಾಪದ ವೆಚ್ಚ 91 ಲಕ್ಷ !

By Staff
|
Google Oneindia Kannada News

ಬೆಂಗಳೂರು : ಛಾಪಾ ಕಾಗದ ಹಗರಣದ ಸೊಲ್ಲಿನ ನಡುವೆ ಫಲಶೃತಿ ಕಾಣದ 8 ದಿನಗಳ ಅವಧಿಯ ಕರ್ನಾಟಕ ವಿಧಾನಮಂಡಲದ ಅಧಿವೇಶನಕ್ಕೆ ಬೊಕ್ಕಸದಿಂದ ಖರ್ಚಾಗಿರುವುದು ಕೇವಲ 91 ಲಕ್ಷ ರುಪಾಯಿ!

ಜನವರಿ 21ರಂದು ರಾಜ್ಯಪಾಲರ ದೀರ್ಘಕಾಲಿಕ ಭಾಷಣದೊಂದಿಗೆ ಪ್ರಾರಂಭವಾದ ಅಧಿವೇಶನ, ಬುಧವಾರ ‘ಅನಿರ್ದಿಷ್ಟ ಅವಧಿಯವರೆಗೆ ಕಲಾಪಗಳನ್ನು ಮುಂದೂಡಲಾಗಿದೆ’ ಎಂಬ ಸ್ಪೀಕರ್‌ ಮಾತಿನೊಂದಿಗೇ ಮುಕ್ತಾಯವಾಯಿತು. ಭಾರೀ ಮೊತ್ತದ ಛಾಪಾ ಕಾಗದ ಹಗರಣದ ಆರೋಪಿ ಕರೀಂ ಲಾಲಾನಿಗೂ ರಾಜ್ಯ ಪ್ರವಾಸೋದ್ಯಮ ಸಚಿವ ಆರ್‌.ರೋಷನ್‌ ಬೇಗ್‌ಗೂ ನಂಟಿದೆ. ಈ ಪ್ರಕರಣದ ಬಗೆಗೆ ಸಿಬಿಐ ತನಿಖೆ ನಡೆಸಬೇಕು, ರೋಷನ್‌ ಬೇಗ್‌ ರಾಜೀನಾಮೆ ಕೊಡಬೇಕು ಎಂಬ ವಿರೋಧ ಪಕ್ಷಗಳ ಒತ್ತಡ ಇಡೀ ಎಂಟು ದಿನಗಳ ಕಲಾಪದಲ್ಲಿ ಕೇಳಿಬಂತು. ಈ ಪ್ರತಿಭಟನೆಯ ದನಿಯಾಂದಿಗೇ ಕಲಾಪ ಕೊನೆಗೊಂಡಿತು.

ಒಂದು ಸಮಸ್ಯೆಯ ಸುತ್ತಲೇ ಗಿರಕಿ ಹೊಡೆದ ಕಲಾಪಗಳು, ರಾಜ್ಯದ ವಿವಿಧ ಸಮಸ್ಯೆಗಳ ಬಗೆ ಹರಿಸುವ ಯತ್ನ ನಡೆಸುವುದೂ ಸಾದ್ಯವಾಗಲಿಲ್ಲ. ಬೊಕ್ಕಸ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಈ ದಿನಗಳಲ್ಲಿ ಯಾವುದೇ ಫಲಶೃತಿ ಕಾಣದ ಕಲಾಪಗಳಿಗೆ ಹಣ ಹರಿದುಹೋಗಿದೆ.

ರಿಜಿಸ್ಟರ್‌ನಲ್ಲಿ ಹಾಜರು, ಕಲಾಪಕ್ಕೆ ಗೈರು

ಅಧಿಕೃತ ಮೂಲಗಳ ಪ್ರಕಾರ ಒಂದು ಅವಧಿಯ ವಿಧಾನಸಭಾ ಕಲಾಪ ನಡೆಸಲು 71 ಸಾವಿರ ರುಪಾಯಿಗೂ ಹೆಚ್ಚು ಹಣ ಖರ್ಚಾಗುತ್ತದೆ. ವಿದಾನ ಪರಿಷತ್ತಿನ ಇಷ್ಟೇ ಸಮಯದ ಕಲಾಪಕ್ಕೆ 46 ಸಾವಿರ ರುಪಾಯಿಗೂ ಹೆಚ್ಚು ವೆಚ್ಚ. 224 ಎಂಲ್‌ಎಗಳು ಹಾಗೂ 75 ಎಂಎಲ್‌ಸಿಗಳಿಗೆ ಪ್ರತಿ ನಿತ್ಯ 500 ರುಪಾಯಿ ಭತ್ಯೆ ಕೊಡುತ್ತಾರೆ. ಅಂದಹಾಗೆ, ಕಲಾಪಕ್ಕೆ ಹಾಜರಾಗುವ ಮುನ್ನವೇ ಅಟೆಂಡೆನ್ಸ್‌ ರಿಜಿಸ್ಟರ್‌ಗೆ ಸಹಿ ಮಾಡಬೇಕು. ಅಂಥವರಿಗೆ ಮಾತ್ರ ಭತ್ಯೆ. ಆದರೆ, ಸಹಿ ಹಾಕಿದವರೆಲ್ಲಾ ಕಲಾಪಗಳಿಗೆ ಹಾಜರಾಗಬೇಕು ಎಂದೇನೂ ಇಲ್ಲವಲ್ಲ ?! ಸಹಿ ಹಾಕಿದ ನಂತರ ತಮ್ಮ ಖಾಸಗಿ ಕೆಲಸಗಳನ್ನು ಮಾಡಿಕೊಳ್ಳುವ ಶಾಸಕರೂ ಉಂಟು.

ಹಿಂದೊಮ್ಮೆ ವಿಧಾನಸಬೆಯ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಸಹಿ ಹಾಕಿಯೂ ಕಲಾಪಕ್ಕೆ ಹಾಜರಾಗದ ಶಾಸಕರ ಪಟ್ಟಿಯನ್ನೇ ಕೊಟ್ಟಿದ್ದರು. ಇದಕ್ಕೆ ದೊಡ್ಡ ಅಪವಾದ ಪಿ.ಜಿ.ಆರ್‌.ಸಿಂಧ್ಯ, ವಾಟಾಳ್‌ ನಾಗರಾಜ್‌ ಹಾಗೂ ಎಸ್‌.ಸುರೇಶ್‌ ಕುಮಾರ್‌. ಇವರು ಕಲಾಪಕ್ಕೆ ಒಮ್ಮೆಯೂ ಚಕ್ಕರ್‌ ಕೊಟ್ಟಿಲ್ಲ !

ಜನತಂತ್ರಕ್ಕೆ ಅಪಚಾರ

ವಿಧಾನಮಂಡಲ ಅಧಿವೇಶನದ ಇತಿಹಾಸದಲ್ಲೇ ಇಂಥ ಅಪಚಾರದ ಉದಾಹರಣೆ ಇನ್ನೊಂದಿಲ್ಲ . ಏಕಾಏಕಿ ಸದನವನ್ನು ಮುಂದೂಡುವುದು ಪ್ರಜಾತಂತ್ರಕ್ಕೆ ಸಲ್ಲ ಅನ್ನುತ್ತವೆ ವಿರೋಧ ಪಕ್ಷಗಳು. ರೋಷನ್‌ ಬೇಗ್‌ ರಾಜೀನಾಮೆ ಕೊಡದ ಹೊರತು, ಛಾಪಾ ಕಾಗದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸದ ಹೊರತು ಸದನ ನಡೆಯಲು ಅವಕಾಶ ಕೊಡುವುದಿಲ್ಲ ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದವು.

ಕನಕಪುರ ಚುನಾವಣೆ ಹೊಸಿತಿಲಲ್ಲಿರುವಾಗ ಪದಾತಿಯಾಬ್ಬನನ್ನು ಬಲಿ ಕೊಡಲು ಕೃಷ್ಣ ಸಿದ್ಧರಿರಲಿಲ್ಲ . ಆ ಕಾರಣಕ್ಕಾಗಿ ಅವರು ಅಧಿವೇಶನವನ್ನೇ ಮುಂದೂಡಲು ನಿರ್ಧರಿಸಿದರು. ವಿದ್ಯುತ್‌ ಸಮಸ್ಯೆ, ಬರ, ರೈತರ ಆತ್ಮಹತ್ಯೆ ಮುಂತಾದ ಸಾಲು ವಿಷಯಗಳು ಸದನದಲ್ಲಿ ಚರ್ಚೆಯಾಗಲು ಸರತಿಯಲ್ಲಿದ್ದವು. ಕೃಷ್ಣ ಬೆನ್ನು ಹಾಕಿದರು. ಪ್ರಜಾತಂತ್ರ ಮತ್ತೊಮ್ಮೆ ಕತ್ತು ತಗ್ಗಿಸಿತು.

ರಾಜಕಾರಣಿಗಳ ಈ ಪರಿಯ ವರ್ತನೆ ಹಾಗೂ ಯಾವುದೇ ಫಲಶೃತಿ ಕಾಣದ ಸದನಗಳ ಕಲಾಪಗಳ ಬಗೆಗೆ ನೀವೇನಂತೀರಿ?

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X