ಕುಳಿತಲ್ಲಿಂದಲೇ ತಿರುಪತಿಯಲ್ಲಿ ಕೊಠಡಿ ಕಾಯ್ದಿರಿಸಿ, ಇದು ಇ-ಯುಗ
ಬೆಂಗಳೂರು :ತಿರುಪತಿ ಗಿರಿವಾಸ ಶ್ರೀವೆಂಕಟೇಶನ ಕಾಣಲು ನಿಮಗೆ ತಿರುಪತಿಗೆ ಹೋಗುವಾಸೆ. ಆದರೆ, ಅಲ್ಲೊಂದು ದಿನ ಉಳಿಯಲು ವಸತಿ ಸಮಸ್ಯೆ! ಇನ್ನು ಮುಂದೆ ನಿಮಗೆ ಆ ಸಮಸ್ಯೆ ಇಲ್ಲ. ನೀವು ಕುಳಿತಲ್ಲಿಂದಲೇ ಕೊಠಡಿ ಕಾಯ್ದಿರಿಸಬಹುದು.
ಮುಜರಾಯಿ ಇಲಾಖೆಗೆ ಸೇರಿದ ಕರ್ನಾಟಕ ರಾಜ್ಯ ವಸತಿ ಗೃಹಗಳಲ್ಲಿ ಆನ್ಲೈನ್ ಮೂಲಕ ಕೊಠಡಿ ಕಾಯ್ದಿರಿಸುವ ವ್ಯವಸ್ಥೆ ಜಾರಿಗೆ ಬಂದಿದೆ. ರಾಜ್ಯ ಮುಜರಾಯಿ ಖಾತೆ ಸಚಿವೆ ಸುಮಾ ವಸಂತ್ ಅವರು ಬುಧವಾರ ಈ ಸೌಲಭ್ಯವನ್ನು ಉದ್ಘಾಟಿಸಿದರು.
ಇದೇ ಮಾದರಿಯ ಸೌಲಭ್ಯವನ್ನು ಶ್ರೀಶೈಲಂ, ಮಂತ್ರಾಲಯ ಹಾಗೂ ವಾರಾಣಸಿಗೂ ವಿಸ್ತರಿಸುವುದಾಗಿ ಸಚಿವರು ತಿಳಿಸಿದರು. ತಿರುಪತಿಗೆ ತೆರಳುವ ಭಕ್ತಾದಿಗಳು ನಗರದ ಚಾಮರಾಜಪೇಟೆಯ ಆಲೂರು ವೆಂಕಟರಾವ್ ರಸ್ತೆಯಲ್ಲಿರುವ ಕೇಂದ್ರ ಕಚೇರಿಯಿಂದ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ವೆಂಕಟೇಶನ ಭಕ್ತರು ತಿರುಪತಿಯಲ್ಲಿ ಕೊಠಡಿಯನ್ನು ಬುಕ್ ಮಾಡಲು, ಆನ್ಲೈನ್ ಬುಕ್ಕಿಂಗ್ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆಯಲು[email protected]ಸಂಪರ್ಕಿಸಬಹುದು ಎಂದು ಇಲಾಖೆಯ ಆಯುಕ್ತರಾದ ಸಿ.ಎನ್. ಸೀತಾರಾಂ ತಿಳಿಸಿದರು. ತಿರುಪತಿಯ ಛತ್ರಗಳಲ್ಲಿ ಭಕ್ತಾದಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ಹಾಜರಿದ್ದ ಇಲಾಖೆ ಕಾರ್ಯದರ್ಶಿ ಸಿ. ಚಿಕ್ಕಣ್ಣ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ನೋಡು ಬಾ ನಮ್ಮೂರ