ಎಪಿಜೆ ಕಲಂ ಹತ್ಯೆಗೆ, ಸಚಿನ್-ಗಂಗೂಲಿ ಅಪಹರಣಕ್ಕೆ ಸಂಚು ರೂಪಿಸಿದ್ದ ಅನ್ಸಾರಿ
ನವದೆಹಲಿ : ಅಣು ವಿಜ್ಞಾನಿ ಎಪಿಜೆ ಅಬ್ದುಲ್ ಕಲಂ ಅವರನ್ನು ಹತ್ಯೆ ಮಾಡಲು ಹಾಗೂ ಸ್ಟಾರ್ ಕ್ರಿಕೆಟರ್ಗಳಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರನ್ನು ಅಪಹರಿಸಲು ಕೊಲ್ಕತ್ತಾದ ಅಮೆರಿಕನ್ ಸೆಂಟರ್ ಮೇಲೆ ದಾಳಿ ನಡೆಸಿದ್ದ ಉಗ್ರ ಅಫ್ತಾಬ್ ಅನ್ಸಾರಿ ಸಂಚು ನಡೆಸಿದ್ದ ಎಂದು ಬುಧವಾರ ಪತ್ರಿಕೆಯಾಂದು ಪ್ರಕಟಿಸಿದೆ.
ನಾಲ್ಕು ತಿಂಗಳ ಹಿಂದೆ ಅಬ್ದುಲ್ ಕಲಂ ಅವರನ್ನು ಕೊಲ್ಲಲು ಅನ್ಸಾರಿ ಸಂಚು ರೂಪಿಸಿದ್ದು , ಸರಿಯಾದ ಆಯುಧಗಳು ಲಭ್ಯವಾಗದ ಕಾರಣ ಸಂಚು ಕಾರ್ಯಗತವಾಗಲಿಲ್ಲ ಎನ್ನಲಾಗಿದೆ. 1998 ರಲ್ಲಿ ಭಾರತ ನಡೆಸಿದ್ದ ಅಣ್ವಸ್ತ್ರ ಪರೀಕ್ಷೆಗಳ ರೂವಾರಿಯಾಗಿದ್ದ ಕಲಂ, ಪ್ರಧಾನಿ ವಾಜಪೇಯಿ ಅವರ ರಕ್ಷಣಾ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಪ ಹಾಗೂ ದೂರಗಾಮಿ ಕ್ಷಿಪಣಿ ತಯಾರಿಕೆಯಲ್ಲೂ ಕಲಂ ಪ್ರಮುಖ ಪಾತ್ರ ವಹಿಸಿದ್ದರು.
ಹಣಕ್ಕಾಗಿ ತೆಂಡೂಲ್ಕರ್ ಅವರನ್ನು ಅಪಹರಿಸಲು ಅನ್ಸಾರಿ ಉದ್ದೇಶಿಸಿದ್ದ . ಅದೇ ರೀತಿ ತಿಹಾರ್ ಜೈಲ್ನಲ್ಲಿರುವ ಲಷ್ಕರ್-ಇ-ತೊಯಿಬಾದ ಉಗ್ರ ಮಹಮ್ಮದ್ ಅಮೀರ್ ಖಾನ್ ಬಿಡುಗಡೆಗಾಗಿ ಸೌರವ್ ಗಂಗೂಲಿ ಅವರನ್ನು ಅಪಹರಿಸಲು ತಂತ್ರ ರೂಪಿಸಿದ್ದ ಎಂದು ವರದಿ ತಿಳಿಸಿದೆ.
ಕೊಲ್ಕತ್ತಾದಲ್ಲಿನ ಅಮೆರಿಕನ್ ಸೆಂಟರ್ ಮೇಲೆ ಇತ್ತೀಚೆಗೆ ನಡೆದ ಉಗ್ರರ ದಾಳಿಯಲ್ಲಿ ಅನ್ಸಾರಿ ಅಲಿಯಾಸ್ ಫರ್ಹನ್ ಮಲ್ಲಿಕ್ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...