ಮಂಗಳೂರಿನಲ್ಲಿ ಕುಡಿವ ನೀರಿನ ಸಮಸ್ಯೆ : ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿ
ಮಂಗಳೂರು : ಸಮುದ್ರದ ನಂಟು ನೀರಿಗೆ ಬರ ಎಂಬುದು ಗಾದೆ. ಬಂದರು ನಗರಿ ಮಂಗಳೂರಿನಲ್ಲಿ ಆಗಿರುವುದೂ ಇದೇ. ಈ ಹೊತ್ತು ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬುಧವಾರ ಈ ವಿಷಯ ಮಹಾನಗರ ಪಾಲಿಕೆ ಸಭೆಯಲ್ಲೂ ಪ್ರತಿಧ್ವನಿಸಿತು.
ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ನಗರದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿದರು. ನಗರದಲ್ಲಿ ನೀರಿನ ಸಮಸ್ಯೆ ನೀವು ಹೇಳುವಷ್ಟು ಬಿಗಡಾಯಿಸಿಲ್ಲ. ಪಾಲಿಕೆ ಚುನಾವಣೆ ಹತ್ತಿರುವಾಗುತ್ತಿರುವ ಹಿನ್ನೆಲೆಯಲ್ಲಿ ನೀವು ನೀರಿನ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂಬ ಕಾಂಗ್ರೆಸ್ ಸದಸ್ಯರ ಟೀಕೆಯಿಂದ ಪರಿಸ್ಥಿತಿ ಹದಗೆಟ್ಟಿತು.
ಪ್ರತಿಪಕ್ಷದ ಸದಸ್ಯರು ಮೇಯರ್ ಮುಂದಿನ ಜಾಗಕ್ಕೆ ತೆರಳಿ ಘೋಷಣೆ ಕೂಗಿದರು. ಈ ಗದ್ದಲದಿಂದ ಬೇಸತ್ತ ಮೇಯರ್ ಹೊರನಡೆದರು. ಪಟ್ಟು ಬಿಡದ ಪ್ರತಿಪಕ್ಷ ಸದಸ್ಯರು, ಉಪ ಮೇಯರ್ ಅವರೊಂದಿಗೆ ವಾಗ್ವಾದಕ್ಕೆ ನಿಂತರು. ಆ ಹೊತ್ತಿಗೆ ಹೊರಗೆ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರು ಪ್ರೇಕ್ಷರ ಗ್ಯಾಲರಿಗೆ ನುಗ್ಗಿ ಘೋಷಣೆ ಕೂಗಿದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.
ಸಭೆ ಮುಂದಕ್ಕೆ ಹೋಯ್ತು. ಸಭೆ ಮತ್ತೆ ಸಮಾವೇಶಗೊಂಡಾಗಲೂ ಪರಿಸ್ಥಿತಿ ಭಿನ್ನವಾಗೇನೂ ಇರಲಿಲ್ಲ. ಈ ಹಂತದಲ್ಲಿ ಗಲಭೆ ನಿಯಂತ್ರಿಸಲು ಪೊಲೀಸರೇ ಅಂಗಳಕ್ಕೆ ಬರಬೇಕಾಯಿತು. ಈ ಗದ್ದಲದಲ್ಲಿ ನೀರಿನ ವಿಷಯವೇ ಮರೆತು ಹೋಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...