ಬುಷ್ ಅವರೇ- ತೀರ್ಥಹಳ್ಳಿಗೆ ಬನ್ನಿ , ವೆಂಕಟರಮಣ ಸ್ವಾಮಿಗೆ ಪೂಜೆ ಮಾಡಿಸಿ
ತೀರ್ಥಹಳ್ಳಿ: ಇದನ್ನು ಓದಿ ನಕ್ಕು ಬಿಡುತ್ತೀರೋ, ಗಂಭೀರವಾಗಿ ಪರಿಗಣಿಸುತ್ತೀರೋ ನಿಮಗೆ ಬಿಟ್ಟದ್ದು . ಆದರೆ, ಇಂಥಾ ಘಟನೆಗಳು ನಮ್ಮ ಸುತ್ತ ಮುತ್ತ ದಿನವೂ ನಡೆಯುತ್ತಿರುವುದನ್ನು ನಿಮ್ಮ ಗಮನಕ್ಕೆ ತರುವುದು ನಮ್ಮ ಉದ್ದೇಶ. ಅಂದಹಾಗೆ- ಶಿವಮೊಗ್ಗದ ಜನವಾರ್ತೆ ಜಿಲ್ಲಾ ಪತ್ರಿಕೆಯಲ್ಲಿ ಪ್ರಕಟವಾದ ಈ ಸುದ್ದಿಯನ್ನು ಹೆಕ್ಕಿ ರಾಜ್ಯದ ಓದುಗರ ಮುಂದಿಟ್ಟಿರುವುದು ಕನ್ನಡಪ್ರಭ ದೈನಿಕ.
ತೀರ್ಥಹಳ್ಳಿ ತಾಲ್ಲೂಕಿನ ದೊಡ್ಡಮನೆಯ ಟಿ.ಡಿ. ಹರಿಶ್ಚಂದ್ರ ಗೌಡ ಅವರು ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೊಂದು ಟೆಲಿಗ್ರಾಫ್ ಸಂದೇಶ ಕಳಿಸಿದ್ದಾರೆ. ಅದು ಭವಿಷ್ಯ ರೂಪದ ಸಂದೇಶ ; ಎಚ್ಚರಿಕೆ ಅಂದರೂ ಆದೀತು. ತಾಲ್ಲೂಕಿನ ತೂದೂರು ದೊಡ್ಡಮನೆ ವೆಂಕಟರಮಣ ಸ್ವಾಮಿಗೆ ಬುಷ್ ಅವರು ವಿಶೇಷ ಪೂಜೆ ಮಾಡಿಸಬೇಕೆನ್ನುವುದು ಹರಿಶ್ಚಂದ್ರ ಗೌಡರ ಸಂದೇಶದಲ್ಲಿನ ಆಗ್ರಹ.
ವೆಂಕಟರಮಣ ಸ್ವಾಮಿಗೆ ಪೂಜೆ ಮಾಡಿಸುವುದರ ಜೊತೆಗೆ 2 ಟ್ರಿಲಿಯನ್ ಡಾಲರ್ಗಳನ್ನು ಬುಷ್ ಕಾಣಿಕೆಯಾಗಿ ನೀಡಬೇಕು. ಇಲ್ಲದೆ ಹೋದಲ್ಲಿ ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಉತ್ತರ ಮತ್ತು ಅಮೆರಿಕಾ ಖಂಡಗಳು ಅಟ್ಲಾಂಟಿಕ್ ಮತ್ತು ಫೆಸಿಪಿಕ್ ಸಾಗರಗಳಲ್ಲಿ ಮುಳುಗುವುದಾಗಿ ಹರಿಶ್ಚಂದ್ರ ಎಚ್ಚರಿಸಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮುಂಬಯಿ ನಗರಗಳು ಅರಬ್ಬೀ ಸಮುದ್ರಗಳಲ್ಲಿ ಮುಳುಗುವುದಾಗಿ ಅವರು ಭವಿಷ್ಯ ನುಡಿದಿದ್ದಾರೆ.
ಬುಷ್ ಅವರಿಗೆ ಈ ಟೆಲಿಗ್ರಾಫ್ ಸಂದೇಶ, ವೆಂಕಟರಮಣ ಸ್ವಾಮಿ ಮಹಿಮೆ ಅರ್ಥವಾದೀತೆ? ತೂದೂರು ವೆಂಕಟರಮಣ ಸ್ವಾಮಿಗೆ ಅದೃಷ್ಟ ಖುಲಾಯಿಸೀತೆ?
(ಇನ್ಫೋ ವಾರ್ತೆ)
ಮುಖಪುಟ / ಲೋಕೋಭಿನ್ನರುಚಿ