ನಕ್ಕೀರನ್ ಪತ್ರಿಕೆಯ ವರದಿಗಾರ ಶಿವಸುಬ್ರಹ್ಮಣ್ಯಂಗೆ ಷರತ್ತಿನ ಜಾಮೀನು
ಬೆಂಗಳೂರು : ಕಾಡುಗಳ್ಳ ವೀರಪ್ಪನ್ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ನಕ್ಕೀರನ್ ಪತ್ರಿಕೆಯ ವರದಿಗಾರ ಶಿವಸುಬ್ರಹ್ಮಣ್ಯಂಗೆ ರಾಜ್ಯ ಉಚ್ಚ ನ್ಯಾಯಾಲಯ ಬುಧವಾರ ಷರತ್ತಿನ ಜಾಮೀನು ಮಂಜೂರು ಮಾಡಿದೆ.
ನವೆಂಬರ್ 20ರಂದು ಕರ್ನಾಟಕ ಪೊಲೀಸರು ಬಂಧಿಸಿದ್ದ, ಶಿವಸುಬ್ರಹ್ಮಣ್ಯಂಗೆ ಜಾಮೀನು ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ವಾದ ಆಲಿಸಿದ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಆರ್. ಗುರುರಾಜನ್ ಅವರು, ಆರು ಷರತ್ತುಗಳ ಮೇಲೆ ಜಾಮೀನು ಮಂಜೂರು ಮಾಡಿದರು. ಈ ಜಾಮೀನು ಫೆ. 18ರಿಂದ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಶಿವಸುಬ್ರಹ್ಮಣ್ಯಂ ಮೈಸೂರು ಜೈಲಿನಲ್ಲಿಯೇ ಇರಬೇಕೆಂದು ನ್ಯಾಯಮೂರ್ತಿಗಳು ಸೂಚಿಸಿದ್ದಾರೆ.
ನ್ಯಾಯಾಲಯ ಜಾಮೀನು ನೀಡಲು ವಿಧಿಸಿರುವ ಪ್ರಮುಖ ಷರತ್ತುಗಳು ಕೆಳಕಂಡಂತಿವೆ :
- ಒಂದು ಲಕ್ಷ ರುಪಾಯಿಗಳನ್ನು ಜಾಮೀನು ಹಣವಾಗಿ ಕಟ್ಟಬೇಕು.
- ಮೈಸೂರು ಪೊಲೀಸರ ಅನುಮತಿ ಇಲ್ಲದೆ ಮೈಸೂರು ಬಿಟ್ಟು ಹೋಗಬಾರದು.
- ಪ್ರತಿನಿತ್ಯ ಮೈಸೂರು ಪೊಲೀಸ್ ಆಯುಕ್ತರ ಕಚೇರಿಗೆ ಹಾಜರಾಗಿ (ಸಂಜೆ 4ರಿಂದ 5ರೊಳಗೆ) ಸಹಿ ಹಾಕಬೇಕು.
- ಪೊಲೀಸರು ಕರೆದಾಗ ಅವರೊಂದಿಗೆ ಹೋಗಿ ವಿಚಾರಣೆಗೆ ಸಹಕರಿಸಬೇಕು. ಈ ವಿಷಯವನ್ನು ವಕೀಲರಾದ ಬಸವಪ್ರಭು ಪಾಟೀಲ್ ಸುದ್ದಿಗಾರರಿಗೆ ಬುಧವಾರ ತಿಳಿಸಿದರು.
ಸತ್ಯಮಂಗಲ ಅರಣ್ಯದಲ್ಲಿ ವೀರಪ್ಪನ್ ಅಡಗುತಾಣದ ಸುಳಿವು ದೊರೆತಿದೆ. ನಮ್ಮ ಪೊಲೀಸರು ಅದನ್ನು ಸುತ್ತುವರಿದಿರುವುದಾಗಿ ತಮಗೆ ಅಧಿಕೃತವಾಗಿ ಮಾಹಿತಿ ಬಂದಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ವೀರಪ್ಪನ್ನನ್ನು ಯಾವಾಗ ಹಿಡಿಯುತ್ತೀರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಅಮೆರಿಕ ಪಡೆಗಳಿಗೇ ಇನ್ನೂ ಒಸಾಮ ಬಿನ್ ಲಾಡೆನ್ನನ್ನು ಹಿಡಿಯಲಾಗಿಲ್ಲ . ವೀರಪ್ಪನ್ನನ್ನು ಸೆರೆ ಹಿಡದ ಕೂಡಲೆ ತಿಳಿಸುತ್ತೇವೆ ಎಂದು ಅವರು ಉತ್ತರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ