ಬಂದಿದೆ ಬೇಸಿಗೆ, ಬತ್ತಿಹಳು ಭೀಮೆ, ನೀರಿಗೆ ಮತ್ತೊಮ್ಮೆ ಬೇಡಿಕೆ
ಬಿಜಾಪುರ : ಸಂಕ್ರಾಂತಿ ಕಳೆದು ಶಿವರಾತ್ರಿ ಹತ್ತಿರವಾಗುತ್ತಿರುವಂತೆಯೇ ಬಿಜಾಪುರದಲ್ಲಿ ಒಣಹವೆ ಬಲಗೊಳ್ಳುತ್ತಿದೆ. ಬಿರು ಬೇಸಿಗೆಯ ಮುನ್ಸೂಚನೆ ನೀಡುತ್ತಿದೆ. ಈ ಮಧ್ಯೆ, ಕಳೆದ ವರ್ಷ ಮಳೆ ಕೈಕೊಟ್ಟ ಕಾರಣ ಈ ಭಾಗದ ಜೀವ ನದಿ ಭೀಮೆ ಬತ್ತಿ ಹೋಗಿದ್ದು, ಜನ ನೀರಿಗೆ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರಿಗೂ ಕಷ್ಟ ಪಡುತ್ತಿರುವ ಜನರು ಉಜ್ಜಿನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುವಂತೆ ಆಗ್ರಹಿಸಿದ್ದಾರೆ. ನೀರಿಗಾಗಿ ಇಂಡಿ ತಾಲೂಕು ಧೂಳಖೇಡ ಬಳಿ ಭೀಮಾನದಿ ಜಲ ರಕ್ಷಣೆ ರೈತವರ್ಗ ಹೋರಾಟ ಸಮಿತಿ ಕಳೆದ ಕೆಲವು ದಿನಗಳಿಂದ ಸತ್ಯಾಗ್ರಹವನ್ನೂ ನಡೆಸಿತು.
ಜ.27ರ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಪಾಟೀಲ್ ಸಾಸನೂರು ಅವರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ರೈತರ ಹಿತ ರಕ್ಷಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಸಚಿವರು ಫೆ. 8ನೇ ತಾರೀಖಿನೊಳಗೆ ಇಂಡಿ ಶಾಖಾ ನಾಲೆಯ 133 ಕಿ.ಮೀಟರ್ವರೆಗೆ ನಾರಾಯಣಪುರ ಅಟೆಕಟ್ಟೆಯಿಂದ ಕೃಷ್ಣಾನದಿ ನೀರು ಹರಿಸಲಾಗುವುದು ಹಾಗೂ ಏಪ್ರಿಲ್ ಹೊತ್ತಿಗೆ ನಾಲೆಯ 172 ಕಿ.ಮೀ.ವರೆಗೆ ನೀರು ಹರಿಸಿ ರೈತರ ಹಿತ ರಕ್ಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಚಿವರು ಕೈಗೊಳ್ಳುವ ಕ್ರಮದಿಂದ ಸದ್ಯಕ್ಕೆ ನೀರಿನ ಸಮಸ್ಯೆ ಬಗೆಹರಿಯಬಹುದು. ಆದರೆ, ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತೊಂದರೆ ಆಗುವ ಸಂಭವಇದ್ದು, ಉಜ್ಜಿನಿ ಜಲಾಶಯದಿಂದ ನೀರು ಪಡೆಯಲು ರಾಜ್ಯ ಸರಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಭೀಮಾ ನದಿ ನೀರು ರಕ್ಷಣೆ ರೈತ ವರ್ಗ ಹೋರಾಟ ಸಮಿತಿಯ ಪಂಚಪ್ಪ ಕಲ್ಬುರ್ಗಿ ಒತ್ತಾಯಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...