ಆರೆಸ್ಸೆಸ್ ಶಾಖೆಗಳಲ್ಲಿ ರಾಷ್ಟ್ರೀಯ ಹಬ್ಬದಂದು ತ್ರಿವರ್ಣ ಬಾವುಟಕ್ಕೆ ನಮನ
ಬೆಂಗಳೂರು : ಇನ್ನು ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿವರ್ಷ ರಾಷ್ಟ್ರೀಯ ದಿನಾಚರಣೆಗಳಂದು ತನ್ನ ಎಲ್ಲ ಶಾಖೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಿದೆ.
ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯೋತ್ಸವದಂದು ಆರೆಸ್ಸೆಸ್ನ ಪ್ರತಿ ಶಾಖೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು ಎಂದು ಆರೆಸ್ಸೆಸ್ನ ಕಾರ್ಯನಿರ್ವಾಹಕ ಸದಸ್ಯ ಕೆ. ಸೂರ್ಯನಾರಾಯಣ ರಾವ್ ತಿಳಿಸಿದ್ದಾರೆ. ಈ ವರೆಗೆ ಆರೆಸ್ಸೆಸ್ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರಲಿಲ್ಲ. ಯಾಕೆಂದರೆ ಸರಕಾರವು ಕೇವಲ ಸರಕಾರೀ ಕಟ್ಟಡಗಳ ಮೇಲೆ ಮಾತ್ರ ರಾಷ್ಟ್ರ ಧ್ವಜ ಹಾರಿಸಬೇಕೆಂಬ ನಿಯಮ ಹೇರಿತ್ತು. ಆದರೆ ಈ ಬಾರಿಯ ಗಣರಾಜ್ಯೋತ್ಸವದ ಮುನ್ನಾ ದಿನ ಕೇಂದ್ರ ಸರಕಾರವು ತ್ರಿವರ್ಣ ಧ್ವಜವನ್ನು ಎಲ್ಲರೂ ಮುಕ್ತವಾಗಿ ಬಳಸಬಹುದು ಎಂದು ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದಂದು ಆರೆಸ್ಸೆಸ್ ಕೇಂದ್ರ ಕಾರ್ಯಾಲಯ ನಾಗಪುರದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಭಾರತಾಂಬೆಗೆ ನಮಿಸಲಾಯಿತು ಎಂದು ಅವರು ವಿವರಿಸಿದರು.
ಆದರೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಆರೆಸ್ಸೆಸ್ಹೋರಾಡಿತ್ತಲ್ಲವೇ ಎಂಬ ಪ್ರಶ್ನೆಗೆ ಅದು ಸಾರ್ವಜನಿಕ ಮೈದಾನ. ವರ್ಷಕ್ಕೊಮ್ಮೆ ಮುಸ್ಲಿಮರು ಅಲ್ಲಿ ಪ್ರಾರ್ಥಿಸಿದ ಮಾತ್ರಕ್ಕೇ ಅದು ವೈಯಕ್ತಿಕ ಭೂಮಿಯಾಗುವುದಿಲ್ಲ. ಅಲ್ಲದೆ ಅದು ಮುನ್ಸಿಫ್ ಮೈದಾನವಾದ್ದರಿಂದ ಅಲ್ಲಿ ರಾಷ್ಟ್ರಧ್ವಜ ಹಾರಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಉತ್ತರಿಸಿದರು.
ಈ ವರೆಗೆ ಗಣ ರಾಜ್ಯೋತ್ಸವದಂದು ಹಾಗೂ ಆಗಸ್ಟ್ 15ರಂದು ರಾಷ್ಟ್ರ ಧ್ವಜ ಹಾರಿಸದೇ ಇರಲು ಸೂರ್ಯನಾರಾಯಣ್ ನೀಡುವ ಇನ್ನೊಂದು ಸಮರ್ಥನೆಯೆಂದರೆ, ಸಂಘದ ಸ್ವಯಂ ಸೇವಕರು ಸಮಾಜದ ಮುಖ್ಯವಾಹಿನಿಯಲ್ಲಿ ನಡೆಯುವ ಧ್ವಜವಂದನಾ ಸಮಾರಂಭದಲ್ಲಿ ಭಾಗವಹಿಸಲು ಇಚ್ಚಿಸುತ್ತಾರೆ. ಒಂದುವೇಳೆ ಶಾಖೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದರೆ, ಶಾಲೆ ಹಾಗೂ ಕಚೇರಿಗಳಲ್ಲಿ ನಡೆಯುವ ಧ್ವಜವಂದನಾ ಕಾರ್ಯಕ್ರಮಗಳನ್ನು ಅವರು ಮಿಸ್ ಮಾಡಿಕೊಳ್ಳುತ್ತಾರೆ.
ಆರೆಸ್ಸೆಸ್ ಪ್ರಥಮ ಬಾರಿಗೆ ರಾಷ್ಟ್ರಧ್ವಜ ಹಾರಿಸಿದೆ ಎಂಬ ವರದಿಗಳನ್ನುಅವರು ನಿರಾಕರಿಸುತ್ತಾರೆ. ಪ್ರಥಮ ಗಣರಾಜ್ಯೋತ್ಸವದಂದು ನಾಗಪುರದಲ್ಲಿ ಅಂದಿನ ಆರೆಸ್ಸೆಸ್ ಮುಖ್ಯಸ್ಥ ಎಂ. ಎಸ್. ಗೋಲ್ವಾಲ್ಕರ್ ಧ್ವಜಾರೋಹಣ ನಡೆಸಿದ್ದರು. ಕಳೆದ ಸ್ವಾತಂತ್ರ್ಯ ದಿನದಂದು ಕೆ. ಎಸ್. ಸುದರ್ಶನ್ ಅವರೂ ಉಡುಪಿಯಲ್ಲಿ ಧ್ವಜ ಹಾರಿಸಿದ್ದರು ಎಂಬ ಉದಾಹರಣೆಗಳನ್ನು ಸೂರ್ಯನಾರಾಯಣ್ ರಾವ್ ಮುಂದಿಡುತ್ತಾರೆ.
(ಇನ್ಫೋ ವಾರ್ತೆ)
ಸಮರಸತಾ
ಸಂಗಮ...
ಮುಖಪುಟ
/
ಇವತ್ತು...
ಈ
ಹೊತ್ತು...