ಸಮರಸತಾ ಸಂಗಮದ ಸಮಾರೋಪದಲ್ಲಿ ಮೊಳಗಿದ ಜ್ಯೋತಿಷ್ಯ-ರಾಷ್ಟ್ರರಕ್ಷಣೆ
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರ, ಆರು ದರ್ಶನಗಳು, ವೇದ ಹಾಗೂ ಉಪನಿಷತ್ತುಗಳನ್ನು ವಿಶ್ವ ವಿದ್ಯಾಲಯಗಳ ಪಠ್ಯದಲ್ಲಿ ಸೇರಿಸಬೇಕು ಎಂದು ಭಾರತೀಯ ಸೂಪರ್ ಕಂಪ್ಯೂಟರ್ ಜನಕ ಡಾ. ವಿಜಯ ಪಿ. ಭಾಟ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಆಧುನಿಕ ವಿಜ್ಞಾನ ಹೊರ ಜಗತ್ತಿನ ಬಗೆಗೆ ಮಾಹಿತಿ ನೀಡುತ್ತದೆ. ಆದರೆ ನಮ್ಮ ವೇದ ಉಪನಿಷತ್ತುಗಳು ಒಳಜಗತ್ತನ್ನು ವಿವರಿಸುತ್ತವೆ ಎಂದ ವಿಜಯ್ ಭಾಟ್ಕರ್, ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮರಸತಾ ಸಂಗಮದ ಬೃಹತ್ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಅಂತರಂಗವನ್ನು ಅರಿಯದೆಯೇ ಜಗತ್ತನ್ನು ತಿಳಿಯುತ್ತೇವೆ ಎಂದುಕೊಂಡರೆ ಅದು ಸಾಧ್ಯವಾಗುವುದಿಲ್ಲ. ಹಿಂದು ಎಂದರೆ ವಿಶ್ವ ಧರ್ಮ . ನಾವು ಹೇಳುವ ಶಾಂತಿ ಮಂತ್ರ ನಮ್ಮ ದೌರ್ಬಲ್ಯದ ಸಂಕೇತ ಎಂದು ಯಾರಾದರೂ ಭಾವಿಸಿದಲ್ಲಿ ಅವರು ಮೂರ್ಖರಾಗಿರುತ್ತಾರೆ ಎಂದು ಭಾಟ್ಕರ್ ಹೇಳಿದರು.
‘ಪಾಕಿಸ್ತಾನ್ ಮುರ್ದಾಬಾದ್ !’
ಆರೆಸ್ಸೆಸ್ನ ಸರಸಂಘ ಚಾಲಕ ಕೆ. ಎಸ್. ಸುದರ್ಶನ್ ಮಾತನಾಡಿ, ಭಾರತದ ಮೇಲೆ ಬಿದ್ದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಪಾಕ್, ಬಾಂಗ್ಲಾ, ಚೀನಾ ದೇಶಗಳು ನಮ್ಮ ವೈರಿಗಳು. ಶ್ರೀಲಂಕಾ, ಬರ್ಮಾ, ನೇಪಾಳ ನಮ್ಮ ಮಿತ್ರ ರಾಷ್ಟ್ರಗಳು. ಬಾಂಗ್ಲಾವನ್ನು ನಿರ್ಮಿಸಿದವರೂ ನಾವೇ. ಈಗ ಅಲ್ಲಿ ಹಿಂದೂಗಳ ಅವ್ಯಾಹತ ಹತ್ಯೆಯಾಗುತ್ತಿದೆ ಎಂದು ಸುದರ್ಶನ್ ವಿಷಾದಿಸಿದರು.
ಅಗತ್ಯ ಶಸ್ತ್ರಾಸ್ತ್ರಗಳಿಲ್ಲದೆಯೇ ಅಹಿಂಸೆಯ ಬಗ್ಗೆ ಮಾತನಾಡುವುದು ಸರಿಯಲ್ಲ. ನಾವು ಆಧುನಿಕ ಶಸ್ತ್ರಾಸ್ತ್ರಗಳನ್ನು ಕ್ರೋಢೀಕರಿಸಬೇಕು. ವೈರಿಗಳ ಹುಟ್ಟಡಗಿಸುವಂತಹ ದೂರಗಾಮಿ ಕ್ಷಿಪಣಿಯನ್ನು ತಯಾರಿಸಬೇಕು ಎಂದು ಅವರು ಸಲಹೆ ಮಾಡಿದರು.
ವೇದಿಕೆಯಲ್ಲಿ ಆರೆಸ್ಸೆಸ್ ಸಹ ಕಾರ್ಯವಾಹರಾದ ಮೋಹನ್ ಭಾಗವತ್, ಹೊ. ವೆ. ಶೇಷಾದ್ರಿ, ದಕ್ಷಿಣ ಭಾರತದ ಕ್ಷೇತ್ರ ಸಂಘಚಾಲಕ ರಾಘವೇಂದ್ರ ಕುಲಕರ್ಣಿ, ಸಮರಸತಾ ಸಂಗಮದ ಮುಖ್ಯಸ್ಥ ಕೆ. ನರಹರಿ, ರಾಷ್ಟ್ರ ಸೇವಿಕಾ ಸಮಿತಿಯ ರುಕ್ಮಿಣಿಯಕ್ಕ ಮತ್ತು ಶಾಂತಾ ಅವರು ಉಪಸ್ಥತರಿದ್ದರು.
ಹೈಲೈಟ್ಸ್ ...
- ಸಮಾರೋಪದಂದು 10 ಸಾವಿರ ಮನೆಗಳಿಂದ 2 ಲಕ್ಷ ಹೋಳಿಗೆ ಸಂಗ್ರಹ
- ನೂರಾರು ಕಿಲೋಮೀಟರ್ ದೂರದವರೆಗೂ ಮೈ ಜುಂ ಎನ್ನಿಸುವಂತೆ ಮೊಳಗಿದ ಘೋಷ ವಾದ್ಯ
- ಶಿಸ್ತಿಗೆ ರೂಪಕವಾಗಿದ್ದ ವ್ಯಾಯಾಮ, ಕವಾಯತು
- ಭಾಷಣದ ಮಧ್ಯೆ ಆಗಾಗ ಮೊಳಗುತ್ತಿದ್ದ ಸ್ನೇಹಕ್ಕೂ ಸಿದ್ಧ ಸಮರಕ್ಕೂ ಸಿದ್ಧ , ಭಾರತ್ ಮಾತಾ ಕೀ ಜೈ ಘೋಷಣೆಗಳು
ಸಮರಸತಾ
ಸಂಗಮ...
ಮುಖಪುಟ
/
ಇವತ್ತು...
ಈ
ಹೊತ್ತು...