ರಾಮ ಎಲ್ಲಿ ಹುಟ್ಟಿದ ಎನ್ನುವುದನ್ನು ಕೋರ್ಟ್ ಹೇಳುವುದಿಲ್ಲ- ಸುದರ್ಶನ್
ಬೆಂಗಳೂರು : ಭಾರತ ಹಾಗೂ ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ರಾಮ ದೇಗುಲ ನಿರ್ಮಾಣ ಆಂದೋಲನವನ್ನು ಮುಂದೂಡುವ ಅಗತ್ಯ ಇಲ್ಲವೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಹಸ್ತಾಂತರ ಸಂಬಂಧಿಸಿದಂತೆ ಪ್ರಧಾನಿ ವಾಜಪೇಯಿ ಅವರಿಗೆ ಸಂತರು ಯಾವುದೇ ಗಡುವು ಗೊತ್ತುಪಡಿಸಿಲ್ಲ . ಮಾರ್ಚ್ 12 ರೊಳಗೆ ಮಂದಿರ ನಿರ್ಮಾಣಕ್ಕೆ ಇರುವ ತೊಡಕುಗಳನ್ನು ನಿವಾರಿಸುವಂತೆ ಮಾತ್ರ ಪ್ರಧಾನಿ ಅವರನ್ನು ಒತ್ತಾಯಿಸಲಾಗಿದೆ. ಆನಂತರವಷ್ಟೇ ಮಂದಿರ ನಿರ್ಮಾಣ ದಿನಾಂಕದ ಕುರಿತು ತೀರ್ಮಾನಿಸಲಾಗುವುದು ಎಂದು ಸುದರ್ಶನ್ ಹೇಳಿದರು.
ಬೆಂಗಳೂರಿನ ನಾಗವಾರದಲ್ಲಿ ಹೊಸತಾಗಿ ರೂಪುಗೊಂಡಿರುವ ಮಾನ್ಯತಾನಗರದಲ್ಲಿ ಶುಕ್ರವಾರ ಆರಂಭವಾದ ಕರ್ನಾಟಕದ ಆರೆಸ್ಸೆಸ್ ಕಾರ್ಯಕರ್ತರ ಮೂರುದಿನಗಳ ಸಮಾವೇಶ ಸಮರಸತಾ ಸಂಗಮದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮಂದಿರ ನಿರ್ಮಾಣ ಆಂದೋಲನಕ್ಕೆ ಸಂಬಂಧಿಸಿದಂತೆ ದೆಹಲಿಗೆ ತೆರಳುವ ಸಂತರ ನಿಯೋಗ ವಾಜಪೇಯಿ ಅವರನ್ನು ಭೇಟಿ ಮಾಡಿ ಅವರ ಮುಂದಿನ ಯೋಚನೆಗಳನ್ನು ವಿವರಿಸುವಂತೆ ಕೇಳಲಿದೆ. ಮಂದಿರ ನಿರ್ಮಾಣ ಕುರಿತಂತೆ ಸಂತರೊಂದಿಗೆ ಚರ್ಚಿಸಲು ಹಾಗೂ ಅವರನ್ನು ತೃಪ್ತಿಗೊಳಿಸುವಂತೆ ಪ್ರಧಾನಿ ಅವರನ್ನು ಒತ್ತಾಯಿಸಲಾಗುವುದು ಎಂದು ಸುದರ್ಶನ್ ಹೇಳಿದರು.
ಶತ್ರುಗಳ ವಿರುದ್ಧ ಸಂತರ ಹೋರಾಟ
ಭಾರತ ಹಾಗೂ ಪಾಕ್ ನಡುವಣ ಸಂಘರ್ಷ ಸಂದರ್ಭದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯುದ್ಧವೇನಾದರೂ ಅನಿವಾರ್ಯವಾದರೆ ಮಂದಿರ ಆಂದೋಲನವನ್ನು ಕೈಬಿಡುವ ಸಂತರು ಶತ್ರುಗಳ ವಿರುದ್ಧ ಹೋರಾಟಕ್ಕಿಳಿಯುವರು. ಆದರೆ, ಪ್ರಸಕ್ತ ಪರಿಸ್ಥಿತಿಯೇ ಬೇರೆ. ಚುನಾವಣೆಗಳು ಎದುರಾಗಿವೆ ಎಂದರೆ ಮಂದಿರ ಆಂದೋಲನವನ್ನೇಕೆ ನಿಲ್ಲಿಸಬೇಕು ಎಂದು ಸುದರ್ಶನ್ ತೀಕ್ಷ್ಮವಾಗಿ ನುಡಿದರು. ಉತ್ತರ ಪ್ರದೇಶ ಚುನಾವಣೆಯಲ್ಲಿ ಮಂದಿರ ಪ್ರಕರಣ ಪ್ರಮುಖ ಪಾತ್ರ ವಹಿಸುತ್ತದೆಂದು ತಾವು ಭಾವಿಸುವುದಿಲ್ಲ ಎಂದು ಅವರು ಹೇಳಿದರು.
ಯಾವುದೇ ನ್ಯಾಯಾಲಯ ರಾಮ ಯಾವ ಸ್ಥಳದಲ್ಲಿ ಹುಟ್ಟಿದ ಎನ್ನುವುದನ್ನು ತೀರ್ಮಾನಿಸುವುದಿಲ್ಲ . ಸೌಹಾರ್ದ ಸಂಬಂಧಕ್ಕಾಗಿ ಕಾಶಿ, ಮಥುರಾ ಹಾಗೂ ಅಯೋಧ್ಯೆಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಮಾರ್ಮಿಕವಾಗಿ ಹೇಳಿದ ಸುದರ್ಶನ್, ಆರೆಸ್ಸೆಸ್ ಬಿಜೆಪಿಯನ್ನು ನಿರ್ದೇಶಿಸುತ್ತಿದೆ ಎನ್ನುವ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಬಿಜೆಪಿಗೆ ತನ್ನದೇ ಆದ ಅಜೆಂಡಾ ಇರುವುದಾಗಿ ಅವರು ಹೇಳಿದರು.
ಈಶಾನ್ಯ ಭಾರತದ ರಾಜ್ಯಗಳಲ್ಲಿ ಕೆಲವು ಮಿಷನರಿಗಳು ಬುಡಕಟ್ಟು ಜನರನ್ನು ಒತ್ತಾಯದಿಂದ ಮತಾಂತರಗೊಳಿಸುತ್ತಿದ್ದಾರೆ. ಇತ್ತೀಚೆಗೆ ತಮ್ಮನ್ನು ಭೇಟಿಯಾದ ಕೆಲವು ಅರುಣಾಚಲ ಪ್ರದೇಶದ ಗುಡ್ಡಗಾಡು ಜನರು ಬಂದೂಕಿನ ತುದಿಯಲ್ಲಿ ಮತಾಂತರ ನಡೆಯುತ್ತಿರುವುದಾಗಿ ತಿಳಿಸಿದರು. ಇಂಥ ಬಲವಂತದ ಮತಾಂತರವನ್ನು ಆರೆಸ್ಸೆಸ್ ವಿರೋಧಿಸುತ್ತದೆ ಎಂದು ಸುದರ್ಶನ್ ಹೇಳಿದರು.
(ಪಿಟಿಐ)
ಇವನ್ನೂ
ಓದಿ..
ಮುಖಪುಟ
/
ಇವತ್ತು...
ಈ
ಹೊತ್ತು...