ಯಾವುದೇ ಧರ್ಮ ಯಾರನ್ನೂ ಕೊಲ್ಲು ಎಂದು ಹೇಳಿಲ್ಲ : ಚುಂಚನಗಿರಿಶ್ರೀ
ಮಾನ್ಯತಾ ನಗರ : ಯಾವುದೇ ಧರ್ಮ ಯಾರನ್ನೂ ಕೊಲ್ಲು ಎಂದು ಹೇಳಿಲ್ಲ. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಭಯೋತ್ಪಾದನೆ ನಿಜಕ್ಕೂ ಅಪಾಯಕಾರಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಬಾಲಗಂಗಾಧರನಾಥ ಸ್ವಾಮೀಜೀ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರು ಹೊರವಲಯದ ನಾಗವಾರಬಳಿ ನಿರ್ಮಿಸಲಾಗಿರುವ ಮಾನ್ಯತಾನಗರದಲ್ಲಿ ಆರ್.ಎಸ್.ಎಸ್.ನ ಸಮರಸತಾ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇದಕ್ಕೂ ಮುನ್ನ ಬಾಲಗಂಗಾಧರ ನಾಥ ಸ್ವಾಮೀಜೀ ಅವರಿಗೆ ಕೇರಳದ ಮಂಗಳ ವಾದ್ಯಗಳೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿ, ವೇದಿಕೆಗೆ ಕರೆತರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಸಹ ಕಾರ್ಯವಾಹ ಹೊ.ವೆ. ಶೇಷಾದ್ರಿ ಅವರು, ದೇಶದ ರಕ್ಷಣೆಗೆ ಎಲ್ಲ ಹಿಂದೂಗಳೂ ಒಂದಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಅವರು ಬರೆದಿರುವ ‘ಹಿಂದೂ ಸಮಾಜದ ಸವಾಲುಗಳು ಮತ್ತು ಅದಕ್ಕೆ ಪರಿಹಾರಗಳು’ ಪುಸ್ತಕದ ಬಿಡುಗಡೆಯೂ ನಡೆಯಿತು.
ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಟೋಪಿ, ಕಾಕಿ ಚಡ್ಡಿ, ಬಿಳಿಯ ಅಂಗಿತೊಟ್ಟು ಕೈಯಲ್ಲೊಂದು ದಂಡ ಹಿಡಿದಿದ್ದ ಸುಮಾರು 50 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಂಡಿದ್ದರು. ನಮಸ್ತೆ ಸದಾ ವತ್ಸಲೆ ಮಾತೃಭೂಮಿ ಎಂಬ ಗೀತೆ ಮೊಳಗಿತು. ಕೇಂದ್ರ ಸಚಿವರಾದ ವೆಂಕಯ್ಯನಾಯ್ದು, ಧನಂಜಯಕುಮಾರ್ ಹಾಗೂ ಯಡಿಯೂರಪ್ಪ ಅವರು ಆರ್ಎಸ್ಎಸ್ ಉಡುಗೆ ತೊಟ್ಟು ಸಮಾವೇಶದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...