ಧಾರವಾಡದ ಪಟ್ಟದಕಲ್ಲು ದೇವಾಲಯ ಸಮುಚ್ಚಯಕ್ಕೆ ರಾಷ್ಟ್ರೀಯ ಪ್ರಶಸ್ತಿ
ಹುಬ್ಬಳ್ಳಿ: ಉತ್ತಮ ನಿರ್ವಹಣೆಗಾಗಿ ಪಟ್ಟದ ಕಲ್ಲು ದೇವಾಲಯ ಸಮುಚ್ಚಯ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ರಾಷ್ಟ್ರೀಯ ಗೌರವ ಪ್ರಶಸ್ತಿಗೆ ಪಾತ್ರವಾಗಿದೆ.
ಪಟ್ಟದ ಕಲ್ಲಿನ ಗುಂಪು ದೇವಾಲಯಗಳ ಸಮುಚ್ಚಯವನ್ನು ಅತ್ಯಂತ ಸಮರ್ಥವಾಗಿ ಮತ್ತು ಸುಂದರವಾಗಿ ರಕ್ಷಿಸಿರುವುದರ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಪ್ರವಾಸೋದ್ಯಮ ಸ್ನೇಹ ಸ್ಮಾರಕಗಳಡಿಯಲ್ಲಿ ನೀಡುವ ಈ ಪುರಸ್ಕಾರಕ್ಕೆ ರಾಜ್ಯದ ಈ ಪುರಾತನ ಪ್ರವಾಸೀ ತಾಣ ಆಯ್ಕೆಯಾಗಿರುವುದು ರಾಜ್ಯಕ್ಕೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಧಾರವಾಡ ವಲಯ ಅಧೀಕ್ಷಕ ಎಸ್. ವಿ. ವೆಂಕಟೇಶಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಪ್ರಶಸ್ತಿ ಸಮಿತಿ ಪಟ್ಟದ ಕಲ್ಲು ದೇವಾಲಯವನ್ನು ಈ ಪುರಸ್ಕಾರಕ್ಕೆ ಶಿಫಾರಸು ಮಾಡಿತ್ತು.
ಹಾಳು ಕೊಂಪೆಯಾಗಿದ್ದ ಪಟ್ಟದ ಕಲ್ಲು ದೇವಾಲಯವನ್ನು ಪುನರುತ್ಥಾನಗೊಳಿಸಿದ ಹೆಗ್ಗಳಿಕೆ ಇತಿಹಾಸ ತಜ್ಞ ಡಾ. ಎಸ್. ಆರ್. ರಾವ್ ಅವರದು. ಅಲ್ಲಿನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಾಗೂ ಅಲ್ಲಿ ವಾಸಿಸುತ್ತಿದ್ದ ಜನರನ್ನು ತೆರವು ಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಲು ಪುರಾತತ್ವ ಇಲಾಖೆಯ ಕೆ.ಪಿ. ಪೂಣಚ್ಚ ಸಹಕರಿಸಿದ್ದರು ಎಂದು ಈ ಸಂದರ್ಭದಲ್ಲಿ ವೆಂಕಟೇಶಯ್ಯ ಸ್ಮರಿಸಿದರು.
ದೇವಾಲಯದ ಆವರಣದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹುಲ್ಲು ಹಾಸು, ತಂಪು ಪಾನೀಯ, ಹೂವಿನ ತೋಟಗಳನ್ನು ಬೆಳೆಸಲಾಗಿದೆ. ವೃದ್ಧರಿಗಾಗಿ ಗಾಲಿ ಕುರ್ಚಿ ವ್ಯವಸ್ಥೆಯೂ ಇಲ್ಲಿದೆ. ದೇವಾಲಯದ ಕುರಿತು ಪ್ರವಾಸಿಗರಿಗೆ ವಿವರಿಸಲು ಸಾಕಷ್ಟು ಮಾರ್ಗದರ್ಶಿಗಳನ್ನು ನೇಮಿಸಲಾಗಿದೆ. ಭಾರತದ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ರಾಜ್ಯದ 600 ಸ್ಮಾರಕಗಳು ಸೇರಿದರೆ ಅವುಗಳಲ್ಲಿ 391 ಸ್ಮಾರಕಗಳು ಧಾರವಾಡದಲ್ಲಿವೆ. ಪಟ್ಟದ ಕಲ್ಲಿನ ದೇವಾಲಯ ಸಮುಚ್ಚಯದಲ್ಲಿಯೇ ಒಟ್ಟು 10 ದೇವಾಲಯವಿದೆ ಎಂದು ವೆಂಕಟೇಶಯ್ಯ ಹೇಳಿದರು.
(ಇನ್ಫೋ ವಾರ್ತೆ)
- ಮುಖಪುಟ / ನೋಡು ಬಾ ನಮ್ಮೂರ