ರಾಜ್ಯದಲ್ಲಿ ತುರ್ತು ಲೋಡ್ ಶೆಡ್ಡಿಂಗ್: ನೀರಿಲ್ಲ, ಹಾಲಿಲ್ಲ...ಗೋಳೋ ಗೋಳು
ಬೆಂಗಳೂರು: ಬುಧವಾರ ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿನ ತೊಂದರೆಯಿಂದಾಗಿ ಕೆಪಿಟಿಸಿಎಲ್ ರಾಜ್ಯಾದ್ಯಂತ ತುರ್ತು ಲೋಡ್ಶೆಡ್ಡಿಂಗ್ನ ಪ್ರಕಟಣೆ ಹೊರಡಿಸಿ ವ್ಯಸ್ತವಾಗಿದ್ದರೆ, ದಿನಕ್ಕೆ ಕನಿಷ್ಠ 18 ಗಂಟೆ ವಿದ್ಯುತ್ ಕೊಡಲೇಬೇಕು ಎಂದು ಆಗ್ರಹಿಸಿ ರಾಜ್ಯದ ಮೂಲೆಗಳಿಂದ ಬಂದ ರೈತರು ಕೆಟಿಸಿಎಲ್ ಭವನಕ್ಕೆ ಮುತ್ತಿಗೆ ಹಾಕಿದರು.
ಬಿತ್ತಿದ ಬೆಳೆಗೆ ನೀರು ಹನಿಸಲು ಹೆಣಗಾಡುವ ರೈತರ ಪಂಪ್ಸೆಟ್ಗಳಿಗೆ ಪ್ರತಿದಿನ ಕನಿಷ್ಠ 18 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಕೆಪಿಟಿಸಿಎಲ್(ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ಗೆ ರೈತರು ಮುತ್ತಿಗೆ ಹಾಕಿದ್ದಾರೆ. ಬೇಡಿಕೆ ಈಡೇರುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ. ಡಿ. ನಂಜುಂಡ ಸ್ವಾಮಿ ಪ್ರಕಟಿಸಿ ಧರಣೆ ಕುಳಿತಿದ್ದು ಧರಣಿ ಗುರುವಾರವೂ ಮುಂದುವರೆಯಲಿದೆ.
ನಿಗಮದ ಅಧ್ಯಕ್ಷ ವಿ.ಪಿ. ಬಳಿಗಾರ್ ರೈತರಿಗೆ ಒಂದು ಗಂಟೆ ಹೆಚ್ಚುವರಿ ವಿದ್ಯುತ್ಕೊಟ್ಟರೆ 6 ತಿಂಗಳಿಗೆ ಸುಮಾರು 600 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತದೆ ಎಂದು ನಿಗಮದ ಕಷ್ಟ ತೋಡಿಕೊಂಡರು. ರೈತರು ಒಂದು ಬೆಳೆಗೆ 30 ಸಾವಿರ ಕೋಟಿ ರೂಪಾಯಿ ಬೆಳೆ ಬೆಳೆಯುತ್ತಾರೆ. ಈ ಮೊತ್ತದ ಮುಂದೆ ಕೆಪಿಟಿಸಿಎಲ್ ಹೇಳುವ ಮೊತ್ತ ದೊಡ್ಡದಲ್ಲ ಎಂದು ನಂಜುಂಡ ಸ್ವಾಮಿ ಉತ್ತರಿಸಿದರು.
ಬೆಂಗಳೂರ ಬೀದಿಯಲ್ಲಿ ಬರಿ ಕತ್ತಲು
ರಾಯಚೂರು ಶಾಖೋತ್ಪನ್ನ ಕೇಂದ್ರ ಹಾಗೂ ಶರಾವತಿ ಜಲ ವಿದ್ಯುತ್ ಕೇಂದ್ರ ಸೇರಿದಂತೆ ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದ್ದು, ಮಂಗಳೂರು ಮತ್ತು ಉಡುಪಿಯ ಹೊರತಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬುಧವಾರ ವಿದ್ಯುತ್ ವ್ಯತ್ಯಯವಾಗಿತ್ತು.
ರಾಜ್ಯದಲ್ಲಿ ಏಕಾಏಕಿ ಸುಮಾರು 1,500 ಮೆಗಾವ್ಯಾಟ್ ವಿದ್ಯುತ್ ಕೊರತೆ ಉಂಟಾಗಿರುವುದರಿಂದ ರಾಜ್ಯಾದ್ಯಂತ ಗುರುವಾರ ಬೆಳಗಿನವರೆಗೆ ತುರ್ತು ಲೋಡ್ ಶೆಡ್ಡಿಂಗ್ವ್ಯವಸ್ಥೆ ಚಾಲ್ತಿಯಲ್ಲಿರುತ್ತದೆ ಎಂದು ಕೆಪಿಟಿಸಿಎಲ್ ಪ್ರಕಟಣೆ ಹೊರಡಿಸಿದೆ.
ರಾಯಚೂರು ಶಾಖೋತ್ಪನ್ನ ಕೇಂದ್ರದ ಸ್ವೀಕೃತಿ ಮತ್ತು ವಿತರಣೆ ಮಾರ್ಗಗಳ ಕಾರ್ಯ ವೈಫಲ್ಯದಿಂದ ರಾಷ್ಟ್ರೀಯ ಜಾಲಕ್ಕೆ ಸಂಪರ್ಕ ಇರುವ ಎಲ್ಲ ಜಲ ವಿದ್ಯುತ್ ಉತ್ಪಾದನಾ ಘಟಕಗಳಿಗೂ ಧಕ್ಕೆಯಾಗಿದೆ. ಮಾರ್ಗ ವೈಫಲ್ಯದ ತಕ್ಷಣವೇ ಆರ್ಟಿಪಿಎಸ್ನಿಂದ ಸಂಪರ್ಕ ಕಲ್ಪಿಸುವ ಮುನಿರಾಬಾದ್, ಸೇಡಂ, ರಾಯಚೂರು, ಬೆಂಗಳೂರು ಮತ್ತು ದಾವಣಗೆರೆ ಮುಖ್ಯ ಮಾರ್ಗಗಳ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಜೊತೆಗೆ ನಾಗಝರಿ, ಕದ್ರಾ, ಅಂಬಿಕಾನಗರ, ಅಂಬೇವಾಡಿ ಜಲವಿದ್ಯುತ್ ಘಟಕಗಳೂ ಕಾರ್ಯನಿಲ್ಲಿಸಿದವು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...