ವಿಮಾನ ನಿಲ್ದಾಣಗಳಿಗೆ ರೇಡಾರ್ ವ್ಯವಸ್ಥೆ ಅಳವಡಿಸಲು ಕೇಂದ್ರ ನಿರ್ಧಾರ
ಬೆಂಗಳೂರು : ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಸುರಕ್ಷೆ ಒದಗಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣಗಳಿಗೆ ಶೀಘ್ರದಲ್ಲೇ ರಾಡಾರ್ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರವಿಮಾನಯಾನ ಸಚಿವ ಸೈಯ್ಯದ್ ಶಹನವಾಜ್ ತಿಳಿಸಿದ್ದಾರೆ.
ಬುಧವಾರ ಸಂಜೆ ವಿಧಾನ ಸೌಧ ಸಮ್ಮೇಳನ ಸಭಾಂಗಣದಲ್ಲಿ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವರ್ತಕರ ಶೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅವರು ಮಾತನಾಡುತ್ತಿದ್ದರು. ಖಾಸಗಿ ಹೂಡಿಕೆಗೆ ದೀರ್ಘಾವಧಿ ಗುತ್ತಿಗೆ ನೀಡಿ, ದೇಶದ ಪ್ರಮುಖ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಸರಕಾರ ನಿರ್ಧರಿಸಿದೆ. ಗೋವಾದ ಮೋಪಾ ಹಾಗೂ ನವ ಮುಂಬಯಿಯಲ್ಲಿಯೂ ಬೆಂಗಳೂರು ಮಾದರಿಯಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಹೇಳಿದರು.
ದೇವನಹಳ್ಳಿ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಕಗವಾಕ್ಷಿ ಯೋಜನೆ ಮೂಲಕ ಕೇಂದ್ರ ಸರಕಾರವು ರಾಜ್ಯಕ್ಕೆ ಸಹಕಾರ ನೀಡುವುದಾಗಿ ಸಚಿವರು ಈ ಸಂದರ್ಭದಲ್ಲಿ ಘೋಷಿಸಿದರು.
ವಿಮಾನ ನಿಲ್ದಾಣಕ್ಕೆ ಯಾರ ಹೆಸರು ?
ಬೆಂಗಳೂರು ಎಂಬುದು ಬರೇ ಊರಿನ ಹೆಸರಷ್ಟೇ ಅಲ್ಲದೆ ಬ್ರಾಂಡ್ ನೇಮ್ ಆಗಿ ಪರಿವರ್ತನೆಯಾಗಿರುವುದರಿಂದ ಈ ನಿಲ್ದಾಣಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಹೆಸರಿಡಬೇಕು. ಬೇರೆ ಹೆಸರಿಡುವ ಅಗತ್ಯ ಇಲ್ಲ ಎಂದು ಈ ಸಂದರ್ಭದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅಭಿಪ್ರಾಯಪಟ್ಟರು.
ಮುಖಪುಟ / ಇವತ್ತು... ಈ ಹೊತ್ತು...