ಮುಖ್ಯಮಂತ್ರಿ ಎಸ್.ಎಂ. ಕೃಷ್ಣರೂ ಅವರ ನ್ಯೂ ಕಾಸ್ಟ್ಯೂಮೂ.. ..
ಬೆಂಗಳೂರು : ನಾಲ್ಕು ಜನ ಹೆಂಗಸರು ಒಂದು ಕಡೆ ಸೇರಿದ್ರೆ ಸಾಮಾನ್ಯವಾಗಿ ಮಾತಾಡೋದೆ ಸೀರೆ, ಒಡವೆ ಬಗ್ಗೆ. ಅದೇ ಗಂಡಸರು ಹೆಚ್ಚಾಗಿ ಡ್ರೆಸ್ಬಗ್ಗೆ ಮಾತಾಡೊಲ್ಲ. ಆದರೆ ಬೆಂಗಳೂರಿನ ಕೆಲವು ಪತ್ರಕರ್ತರು ಇದಕ್ಕೆ ಎಕ್ಸ್ಸೆಪ್ಶನ್. ನಾವು ಎಸ್.ಎಂ. ಕೃಷ್ಣ ಅವರು ಭಾಗವಹಿಸುವ ಕಾರ್ಯಕ್ರಮಕ್ಕೆ ಹೋದ್ರೆ. ಕೃಷ್ಣ ಬರುವ ತನಕ ಮಾತಾಡೋ ವಿಷಯ ಏನು ಗೊತ್ತೆ.. ಅವರ ಡ್ರೆಸ್ ಬಗ್ಗೆ.. ಇವತ್ತು ಕೃಷ್ಣ ಏನು ಡ್ರೆಸ್ ಹಾಕೊಂಡು ಬರ್ತಾರೆ ಅಂತ ಗೆಸ್ ಮಾಡಿ ಬೆಟ್ಸ್ ಕೂಡ ಕಟ್ಟಿ ಬಿಡ್ತೀವಿ. (ಸದಾ ಸುದ್ದಿಯ ಬೆನ್ನು ಹತ್ತುವ ನಮಗೂ ಕೊಂಚ ಮನರಂಜನೆ ಬೇಕಲ್ಲಾ!)
ಇವತ್ತು ಕೃಷ್ಣ ವೈಟ್ ಜುಬ್ಬ ಪೈಜಾಮ ಹಾಕಿಕೊಂಡು ಶಾಲು ಹೊದ್ದು ಬರ್ತಾರೆ ಅಂತ ಒಬ್ರು ಅಂದೆ, ಇಲ್ಲ ಬ್ಲ್ಯೂ ಪ್ಯಾಂಟ್ ವೈಟ್ ಶರ್ಟ್ ವಿತ್ ವೇಸ್ ಕೋಟ್ ಆರ್ ಹಾಫ್ ಸ್ವೆಟರ್ನಲ್ಲಿ ಹಾಜರಾಕ್ತಾರೆ ಅಂತ ಇನ್ನೊಬ್ರು. ಅಲ್ರೀ ಇವತ್ತು ಹೇಳಿ ಕೇಳಿ ಜಾಯಿಂಟ್ ಸೆಷನ್ನು... ಟಿ.ವಿ. ರಿಲೆ ಬೇರೆ ಇದೆ ಅಂದ ಮೇಲೆ ಕೃಷ್ಣ 100 % ಫುಲ್ನೆಕ್ ಸೂಟಲ್ಲೇ ಬರ್ತಾರೆ ಅಂದ್ರು ಅನುಭವಿ ಪತ್ರಕರ್ತರೊಬ್ಬರು.
ಆದರೆ, ಕೃಷ್ಣ ಸೋಮವಾರ ವಿಧಾನಸಭೆ ಪ್ರವೇಶಿಸಿದಾಗ ಪತ್ರಕರ್ತರು, ಕಾಂಗ್ರೆಸ್ ಸದಸ್ಯರು, ಪ್ರತಿಪಕ್ಷನಾಯಕರು.. ಎಲ್ಲರೂ ಸುಸ್ತು. ಕೃಷ್ಣ ಹೊಸ ಕಾಸ್ಟ್ಟ್ಯೂಮ್ ಅಂಡ್ ಗೆಟಪ್ನಲ್ಲಿದ್ರು. ನೆಹರೂ ಅವರಂತೆ ಗರಿಗರಿ ಫುಲ್ನೆಕ್ಬ್ಲಾಕ್ ಕೋಟ್ ತೊಟ್ಟಿದ್ದ ಕೃಷ್ಣ , ವಿ.ಪಿ. ಸಿಂಗ್ ಅವರಂತೆ ಗ್ರೇಕಲರ್ ಫರ್ ಕ್ಯಾಪ್ ಹಾಕಿದ್ರು.
ಒಬ್ಬರಂದ್ರು.. ಇದೇನಪ್ಪ ಕೃಷ್ಣ ಅವರಿಗೂ ಯಾರೋ ಟೋಪಿ ಹಾಕಿಬಿಟ್ಟಿದ್ದಾರೆ... ಕೃಷ್ಣ ಟೋಪಿ ಹಾಕಿಸ್ಕಳೋ ಆಸಾಮಿ ಅಲ್ಲ, ಅವರೇನಿದ್ರು ಟೋಪಿ ಹಾಕ್ತಾರೆ... ಹೇಳಿ ಕೇಳಿ ಕನಕಪುರ ಚುನಾವಣೆ ಬರ್ತಾ ಇದೆಯಲ್ಲ ಅದಕ್ಕೆ ಈ ತಯಾರಿ ಅಂದರು ಮತ್ತೊಬ್ರು.
ಅಲ್ಲಾ.. ಟೋಫನ್ (ವಿಗ್) ಇರುವಾಗ ಕೃಷ್ಣಗೆ ಟೋಪಿ ಏಕೆ? ಎಂದು ಪ್ರಶ್ನಿಸಿದ ಪ್ರತಿಪಕ್ಷ ನಾಯಕರು, ತಮ್ಮ ಟೇಬಲ್ ಮೇಲಿದ್ದ ರಾಜ್ಯಪಾಲರದ ಭಾಷಣದ ಕಾಪಿ ನೋಡೋ ಬದಲು, ಕೃಷ್ಣರ ಟೋಪಿ ನೋಡೋದ್ರಲ್ಲೇ ತಲ್ಲೀನರಾಗಿದ್ರು.
ಸದಾ ಬಿಳಿ ಫರ್ ಕ್ಯಾಪ್ ಹಾಕಿಕೊಳ್ಳುವ ಬಿಜೆಪಿಯ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಂತೂ ಅಲ್ರೀ ಕೃಷ್ಣ ನನಗೇ ಕಾಂಪಿಟೇಟರ್ ಆಕ್ತಾ ಇದ್ದಾರೆ ಅಂತ ಉದ್ಗಾರು ಎಳೆದ್ರು...
ಸಾಮಾನ್ಯವಾಗಿ ಕರಿ ಬಣ್ಣದ ತುಪ್ಪಳದ ಕ್ಯಾಪ್ ಹಾಕುವ ಕಾಂಗ್ರೆಸ್ ಸಚಿವ ಕಾಶಪ್ಪನರ್ ಇಂದು ಬಂದಿಲ್ಲ ನೋಡಿ ಅದಕ್ಕೆ, ಕೃಷ್ಣ ಆ ಛಾನ್ಸ್ ತಗೊಂಡಿದ್ದಾರೆ ಅಂದ್ರು ಮಗದೊಬ್ರು...
ಯಾರು ಏನೇ ಹೇಳ್ಲಿ, ತಮ್ಮ ವಸ್ತ್ರ ವಿನ್ಯಾಸಕ್ಕೆ ಹೆಚ್ಚು ಮಹತ್ವ ಕೊಡುವ ಕೃಷ್ಣ, ಸದಾ ಗರಿಗರಿ ವಸ್ತ್ರ ತೊಟ್ಟು, ಎಲ್ಲರ ಗಮನ ತಮ್ಮತ್ತ ಸೆಳೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.. ಅಂದಹಾಗೆ ಕೃಷ್ಣ ವಸ್ತ್ರ ವಿನ್ಯಾಸಗಾರರೂ ಹೌದು. ಸೋಮವಾರವಂತೂ ಎಲ್ಲರ ಕಣ್ಣೂ ಕೃಷ್ಣ ಟೋಪಿ ಮೇಲೇ ನೆಟ್ಟಿತ್ತು.
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ