ಕಂಡು ಕಂಡು ನಮ್ಮ ಕೈ ಬಿಡದಿರೋ..’ ಕೃಷ್ಣನಿಗೆ ಪಲಿಮಾರು ಶ್ರೀ ಮೊರೆ
ಬೆಂಗಳೂರು : ವಿಶ್ವ ವ್ಯಾಪಿಯಾಗಿರುವ ಭಯದ ವಾತಾವರಣ ಹಾಗೂ ಐಹಿಕ ಲಾಲಸೆಗಳಿಂದ ಪಾರಾಗಲು ಶ್ರೀಕೃಷ್ಣನ ಮೊರೆ ಹೊಗುವುದೊಂದೇ ಉಳಿದಿರುವ ಮಾರ್ಗ ಎಂದು ಶುಕ್ರವಾರ ಪರ್ಯಾಯ ಪೀಠವೇರಿದ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಧಾರ್ಮಿಕ ವಿಧಿಗಳು ಹಾಗೂ ನಿರಂತರ ಅನುರಣನಗೊಳ್ಳುತ್ತಿದ್ದ ಮಂತ್ರಘೋಷದ ನಡುವೆ ಪರ್ಯಾಯ ಸರ್ವಜ್ಞ ಪೀಠವೇರಿದ ನಂತರ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾಧೀಶ ಸ್ವಾಮೀಜಿ ಆಶೀರ್ವಚನ ನೀಡಿದರು. ಭಕ್ತಿ ಹಾಗೂ ತ್ಯಾಗ ಮೇಳೈಸಿದರಷ್ಟೇ ಭಗವಂತನಲ್ಲಿ ಪ್ರೇಮ ಹುಟ್ಟಲು ಸಾಧ್ಯ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಪರ್ಯಾಯ ಪೀಠದಿಂದ ನಿರ್ಗಮಿಸಿದ ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಬಹಳ ಪ್ರೀತಿಯಿಂದ ಶ್ರೀಕೃಷ್ಣನ ಪೂಜಿಸುವ ಕಾಯಕವನ್ನು ತಮಗೆ ವಹಿಸಿಕೊಟ್ಟಿದ್ದಾರೆ. ಸಂಸಾರ ಸಮುದ್ರದಲ್ಲಿ ಕೃಷ್ಣ ಚಿಂತನೆ ನಡೆಸುವ ಮೂಲಕ ಜ್ಞಾನದ ನವನೀತ ಲಭಿಸುತ್ತದೆ. ಮಧ್ವಾಚಾರ್ಯರು ಶ್ರೀಕೃಷ್ಣ ಮೂರ್ತಿ ಸ್ಥಾಪಿಸಿರುವುದು ಈ ಉದ್ದೇಶಕ್ಕಾಗಿಯೇ ಎಂದು ಸ್ವಾಮೀಜಿ ಹೇಳಿದರು.
ಇದಕ್ಕೂ ಮುನ್ನ ತಮ್ಮ ಪರ್ಯಾಯ ಪೀಠಾವಧಿಯಲ್ಲಿ ಶುಕ್ರವಾರ ಬೆಳಗ್ಗೆ ಕೊನೆಯ ಉಷಃಕಾಲ ಪೂಜೆ ಮಾಡಿದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು, ಆನಂತರ ವರ್ಣರಂಜಿತ ಮೆರವಣಿಗೆಯಲ್ಲಿ ಆಗಮಿಸಿದ ವಿದ್ಯಾಧೀಶರನ್ನು ಸರ್ವಜ್ಞ ಪೀಠಕ್ಕೆ ಸ್ವಾಗತಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...