ರಾಜ್ಯದಲ್ಲಿ ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನಾ ಸ್ಥಾವರ ಸ್ಥಾಪನೆಗೆ ಒಪ್ಪಿಗೆ
ಬೆಂಗಳೂರು : ರಾಜ್ಯದಲ್ಲಿ ಒಂದು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಕೇಂದ್ರವನ್ನು ಸ್ಥಾಪಿಸಲು ಮತ್ತು ಕೇಂದ್ರ ವಿದ್ಯುತ್ ಜಾಲಕ್ಕೆ ಹೆಚ್ಚುವರಿ ವಿದ್ಯುತ್ ಸೇರ್ಪಡೆ ಮಾಡಿಕೊಳ್ಳಲು ಕೇಂದ್ರ ವಿದ್ಯುತ್ ಇಲಾಖೆ ಒಪ್ಪಿಗೆ ನೀಡಿದೆ.
ಈ ಸಮ್ಮತಿಯಿಂದಾಗಿ ಮುಂಬರುವ ವರ್ಷಗಳಲ್ಲಿ ರಾಜ್ಯವು ವಿದ್ಯುತ್ ಕೊರತೆಯಿಂದ ಮುಕ್ತವಾಗಲು ಸಹಕಾರಿಯಾಗುತ್ತಿದೆ. ಬಹುತೇಕ ಮಾರ್ಚ್ ತಿಂಗಳಿನಲ್ಲೇ ಈ ಸ್ಥಾವರ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಈ ವಿಷಯವನ್ನು ರಾಜ್ಯ ಇಂಧನ ಖಾತೆ ಸಚಿವ ವೀರಕುಮಾರ್ ಪಾಟೀಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ವಿದ್ಯುತ್ ಇಲಾಖೆಯ ಸಮ್ಮತಿ ದೊರೆತಿರುವ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಅಧಿವೇಶನಾನಂತರ ಕೇಂದ್ರ ಇಂಧನ ಸಚಿವ ಸುರೇಶ್ ಪ್ರಭು ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಸುಮಾರು 3000 ಕೋಟಿ ರುಪಾಯಿ ಬಂಡವಾಳದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಕೇಂದ್ರ ಸ್ಥಾಪನೆ ಆಗಲಿದೆ ಎಂದು ಅವರು ತಿಳಿಸಿದರು.
ರಾಜ್ಯದ ರಾಜಧಾನಿ ಬೆಂಗಳೂರು ಅಥವಾ ಅರಮನೆಗಳ ನಗರಿ ಮೈಸೂರಿನಲ್ಲಿ ಈ ವಿದ್ಯುತ್ ಕೇಂದ್ರ ಸ್ಥಾಪಿಸುವ ಪ್ರಸ್ತಾಪ ಸರಕಾರದ ಮುಂದಿದೆ. ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾರ್ಚ್ ತಿಂಗಳೊಳಗೆ ಸ್ಥಳವನ್ನು ನಿರ್ಧರಿಸಲಾಗುವುದು ಎಂದೂ ಸಚಿವರು ಹೇಳಿದರು.
ಹೆಚ್ಚುವರಿ ವಿದ್ಯುತ್ : ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಕ್ಷಾಮದ ಹಿನ್ನೆಲೆಯಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಕೇಂದ್ರ ವಿದ್ಯುತ್ ಜಾಲದಿಂದ 100 ಮೆಗಾವ್ಯಾಟ್ ವಿದ್ಯುತ್ನ್ನು ರಾಜ್ಯಕ್ಕೆ ನೀಡಲು ಕೇಂದ್ರ ಇಂಧನ ಸಚಿವರು ಒಪ್ಪಿದ್ದಾರೆ ಎಂದೂ ವೀರಕುಮಾರ್ ಪಾಟೀಲ್ ತಿಳಿಸಿದರು.
ರಾಜ್ಯ ಸರಕಾರ ಮುಂದಿಟ್ಟಿದ್ದ 200 ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಬೇಡಿಕೆಗೆ ಕೇಂದ್ರ ಮನ್ನಣೆ ನೀಡಿದೆ ಎಂದೂ ಅವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...