ಮೂರ್ನಾಡು ಕಾಫಿ ಬೆಳೆಗಾರರ ಸಮ್ಮೇಳನದಲ್ಲಿ ಆವರ್ತ ನಿಧಿ ಸ್ಥಾಪನೆಗೆ ನಿರ್ಣಯ
ಮೂರ್ನಾಡು: ಬೆಲೆಕುಸಿತದಿಂದ ಸಂಕಷ್ಟಕ್ಕೀಡಾಗಿರುವ ಕಾಫಿ ಉದ್ಯಮವನ್ನು ಪಾರು ಮಾಡುವ ದೃಷ್ಟಿಯಿಂದ ಕನಿಷ್ಟ 500 ಕೋಟಿ ರೂಪಾಯಿಗಳ ಆವರ್ತ ನಿಧಿಯನ್ನು ಸ್ಥಾಪಿಸಲು ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಮಾವೇಶ ನಿರ್ಧರಿಸಿದೆ.
ಚೌರೀರ ಸುಬ್ರಮಣಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಮಾವೇಶದಲ್ಲಿ ಕೋಮಾರ್ಕ್ಸ್ ಸಂಸ್ಥೆಯ ಮಾಡಿ ಅಧ್ಯಕ್ಷ ಎ.ಟಿ. ಭೀಮಯ್ಯ ನಿರ್ಣಯಗಳನ್ನು ಮಂಡಿಸಿದರು. ಮೂರ್ನಾಡು ಕಾಫಿ ಬೆಳೆಗಾರರ ಆಶ್ರಯ ಈ ಸಮ್ಮೇಳನ ನಡೆಯಿತು.
ಕಾಫಿ ಉದ್ಯಮ ಎದುರಿಸುತ್ತಿರುವ ಸಮಸ್ಯೆ ಉದ್ಯಮವನ್ನು ಅವಲಂಬಿಸಿರುವ ಅಸಂಖ್ಯಾತ ಕೂಲಿ ಕಾರ್ಮಿಕರು, ವ್ಯಾಪಾರಿಗಳು ಮತ್ತು ಕಾಫಿ ಉದ್ಯಮಕ್ಕೆ ಸಂಬಂಧಿಸಿದೆ. ಆದ್ದರಿಂದ ಸರಕಾರ ಈ ಬಗ್ಗೆ ತಕ್ಷಣವೇ ಗಮನ ಹರಿಸಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಯಿತು.
ಕಾಫಿ ಬೆಳೆಗಾರರು ಕಾಫಿ ಕೃಷಿಗಾಗಿ ಪಡೆದಿರುವ ಎಲ್ಲ ವಿಧದ ಸಾಲ ಮತ್ತು ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ರೈತರಿಗೆ ವೈಯಕ್ತಿಕ ನೆಲೆಯಲ್ಲಿ ಫಸಲು ವಿಮೆ ಸೌಲಭ್ಯ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಮುಂದಿಡಲಾಯಿತು.
ವಿಶ್ವ ಕೃಷಿ ವ್ಯಾಪಾರ ಸಂಸ್ಥೆಯ ಹಸಿರು ಪಟ್ಟಿಯಲ್ಲಿ ಕಾಫಿ ಉದ್ಯಮವನ್ನು ಸೇರಿಸಬೇಕು. ಕಾಫಿ ಸಂಸ್ಕರಣೆ ಮಾಡಲು ಬಳಸುವ ಎಲ್ಲ ಉಪಕರಣಗಳಿಗೆ, ಪಾಚಿ ಮತ್ತು ಶಿಲೀಂಧ್ರ ನಾಶಕಗಳಿಗೆ ಆಮದು ತೆರಿಗೆಯನ್ನು ರದ್ದುಪಡಿಸಿ, ಶೇ 75ರಷ್ಟು ಸಹಾಯಧನ ನೀಡಬೇಕು ಎಂಬ ಬೇಡಿಕೆಗಳನ್ನೂ ಸಮಾವೇಶ ಸರಕಾರದ ಮುಂದಿಟ್ಟಿದೆ.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...