ಸಾಯಿಬಾಬಾ ಆಸ್ಪತ್ರೆಗೆ ಮೊದಲ ಹುಟ್ಟುಹಬ್ಬ : ಜನವರಿ 19ರಂದು ಸಮ್ಮೇಳನ
ಬೆಂಗಳೂರು : ಈವರೆಗೆ ಒಂದು ಲಕ್ಷದ ಮೂವತ್ತೆೈದು ಸಾವಿರ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿರುವ, ಅದರಲ್ಲೂ ಚಿಕ್ಕಾಸೂ ಇಸಿದುಕೊಳ್ಳದೆ ಬಡವರ ರೋಗ ನಿವಾರಿಸಿರುವ ವೈಟ್ಫೀಲ್ಡ್ನಲ್ಲಿರುವ ಸತ್ಯಸಾಯಿಬಾಬಾ ಆಸ್ಪತ್ರೆಗೆ ಒಂದು ವರ್ಷ ತುಂಬಿದೆ. ಈ ಸ್ಮರಣಾರ್ಥ ಜನವರಿ 19ರಂದು ಇಲ್ಲಿ ಆರೋಗ್ಯ ಸಮ್ಮೇಳನ ಏರ್ಪಾಟಾಗಿದೆ.
ಕಳೆದ ವರ್ಷ ಪ್ರಧಾನಿ ಎ.ಬಿ.ವಾಜಪೇಯಿ ಉದ್ಘಾಟಿಸಿದ ಈ ಆಸ್ಪತ್ರೆಯಲ್ಲಿ ಈವರೆಗೆ ಎರಡೂ ಮುಕ್ಕಾಲು ಸಾವಿರ ಮಂದಿಗೆ ಗಂಭೀರ ಸ್ವರೂಪದ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ಪೈಕಿ ಒಂದೂ ಮುಕ್ಕಾಲು ಸಾವಿರ ಮಂದಿ ಹೃದಯಕ್ಕೆ ಸಂಬಂಧಿಸಿದ ತೊಂದರೆ ಎದುರಿಸುತ್ತಿದ್ದರು. ನರಮಂಡಲದ ತೊಂದರೆ ಅನುಭವಿಸುತ್ತಿದ್ದ 1044 ರೋಗಿಗಳಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹೈಟೆಕ್ ಪಟ್ಟಿ ಹಾಕಿಕೊಂಡಿದ್ದರೂ ಬಡವರ ಸೇವೆಗೆ ಮುಂದಾಗಿರುವ ಅಗ್ಗಳಿಕೆ ಈ ಆಸ್ಪತ್ರೆಯದು.
ಕನಸುಗಾರ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ, ಡಾ. ಮೈಕೆಲ್ ನೋಬಲ್, ಡಾ. ಎಂ.ಎಸ್.ವಲಿಯಾಥನ್, ಕೇಂದ್ರ ಆರೋಗ್ಯ ಸಚಿವ ಡಾ.ಸಿ.ಪಿ.ಠಾಕೂರ್ ಹಾಗೂ ಕರ್ನಾಟಕ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಮ್ಮೇಳನದ ದಿನ ಮಾತಾಡಲಿದ್ದಾರೆ. ಸತ್ಯ ಸಾಯಿಬಾಬಾ ಕೂಡ ಸಮ್ಮೇಳನದಲ್ಲಿ ಆಶೀರ್ವಚನ ನೀಡಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...