ರಾಜ್ಯದ ಕೊರತೆ ತುಂಬಿಸಲು ಒರಿಸ್ಸಾದ 100 ಮೆ.ವ್ಯಾ. ವಿದ್ಯುತ್
ಬೆಂಗಳೂರು : ರಾಜ್ಯದಲ್ಲಿ ಉಂಟಾಗಿರುವ ತೀವ್ರ ವಿದ್ಯುತ್ ಅಭಾವವನ್ನು ಸರಿತೂಗಿಸಲು ಒರಿಸ್ಸಾದ ಜೊತೆ ಒಪ್ಪಂದವೇರ್ಪಟ್ಟಿದ್ದು, ಒಂದೆರಡು ದಿನಗಳೊಳಗೆ ರಾಜ್ಯಕ್ಕೆ ನೂರು ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಆಗಲಿದೆ. ಈ ವಿಷಯವನ್ನು ರಾಜ್ಯ ವಿದ್ಯುತ್ ಸಚಿವ ವೀರಕುಮಾರ್ ಪಾಟೀಲ್ ತಿಳಿಸಿದ್ದಾರೆ.
ಮುಂಗಾರು ವೈಫಲ್ಯದಿಂದಾಗಿ ರಾಜ್ಯದ ಜಲಾಶಯಗಳು ಬರಿದಾಗಿದ್ದು, ರಾಜ್ಯದಲ್ಲಿ ತೀವ್ರ ವಿದ್ಯುತ್ ಕೊರತೆ ತಲೆದೋರಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಒರಿಸ್ಸಾ ವಿದ್ಯುತ್ ಪ್ರಸರಣ ನಿಗಮದ ನಡುವೆ ಶುಕ್ರವಾರ ಏರ್ಪಟ್ಟಿದ್ದು, ಒಂದೆರಡು ದಿನದಲ್ಲೆ ವಿದ್ಯುತ್ ದೊರಕಲಿದೆ ಎಂದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬರುವ ಬೇಸಿಗೆಯ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಇನ್ನೂ ತೀವ್ರವಾಗಲಿದ್ದು, ಇದನ್ನು ಎದುರಿಸಲು ಸರಕಾರ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು. ಇದಕ್ಕಾಗಿ ಮುಂಬಯಿಯ ಟಾಟಾ ಕಂಪನಿಯಿಂದಲೂ 100 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಸಮಾಲೋಚನೆ ನಡೆದಿದೆ ಎಂದರು.
ಈ ಹೊತ್ತು ಒರಿಸ್ಸಾದಿಂದ ಖರೀದಿಸಲಾಗುತ್ತಿರುವ ವಿದ್ಯುತ್ಗೆ ಪ್ರತಿ ಯೂನಿಟ್ಗೆ 2.35 ಪೈಸೆ ನೀಡಲಾಗುತ್ತಿದೆ. ಈ ಒಪ್ಪಂದ ಕೇವಲ 3 ತಿಂಗಳ ಅವಧಿಗೆ ಮಾತ್ರ ಸೀಮಿತವಾಗಿದೆ ಎಂದರು. ವಿದ್ಯುತ್ ಪೂರೈಕೆ ಮಾರ್ಗವಾದ ಆಂಧ್ರಪ್ರದೇಶದಲ್ಲಿ ಗ್ರಿಡ್ ದುರ್ಬಲವಾಗಿರುವುದರಿಂದ ಮೊದಲ ಹಂತದಲ್ಲಿ 50 ಮೆಗಾವ್ಯಾಟ್ ವಿದ್ಯುತ್ ಪಡೆಯಲಾಗುತ್ತಿದ್ದು, ಉಳಿದ ವಿದ್ಯುತ್ ಅನ್ನು ನಂತರ ತರಿಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...