‘ಇಲ್ಲಿ ಎಲ್ಲವೂ ಇದೆ, ಬನ್ನಿ ಬಂಡವಾಳ ಹೂಡಿ- ನಿಮ್ಮ, ಆರ್.ವಿ.ದೇಶಪಾಂಡೆ’
ಬೆಂಗಳೂರು: ರಾಜ್ಯದ ವಿದ್ಯುತ್ ವಿತರಣೆಯನ್ನು ಮುಂದಿನ 6 ತಿಂಗಳಲ್ಲಿ ಖಾಸಗೀಕರಣ ಮಾಡಲಾಗುವುದು ಎಂದು ಭಾರೀ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಇನ್ನೊಂದು ವಾರದಲ್ಲಿ ಲೇಬರ್ ಲಾ ತಿದ್ದುಪಡಿಗಳ ರಾಜ್ಯಪತ್ರ ಹೊರಡಿಸಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ನಡೆಸಿದೆ ಎಂದು ಶುಕ್ರವಾರ ಪಾಲುದಾರರ ಸಮಿತಿ-2002 ರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ದೇಶಪಾಂಡೆ ಹೇಳಿದರು. ತಮ್ಮ ಭಾಷಣದುದ್ದಕ್ಕೂ ವಿದೇಶಿ ಬಂಡವಾಳದಾರರಿಗೆ ರಾಜ್ಯ ಸರ್ಕಾರ ಒದಗಿಸಿರುವ ಸೌಲಭ್ಯಗಳ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿನ ಅವಕಾಶಗಳ ಪಟ್ಟಿ ನೀಡಿದರು.
ಪ್ರವಾಸೋದ್ಯಮ, ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಇಂಜಿನಿಯರಿಂಗ್, ಸಿಮೆಂಟ್ ಹಾಗೂ ಉಕ್ಕು ಉದ್ದಿಮೆ ಸೇರಿದಂತೆ ರಾಜ್ಯದಲ್ಲಿ ಅವಕಾಶಗಳು ಹೇರಳವಾಗಿದ್ದು , ವಿದೇಶಿ ಬಂಡವಾಳಗಾರರು ಹೆಚ್ಚಿನ ಬಂಡವಾಳ ಹೂಡಲು ಮುಂದಾಗಬೇಕೆಂದು ಅವರು ಕರೆ ನೀಡಿದರು.
ರಾಜ್ಯದ ಸದೃಢ ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳ ಬೆಳವಣಿಗೆಗೆ ಅನುಕೂಲವಾಗುವ ಪರಿಸರವನ್ನು ರೂಪಿಸಿದೆ. ಎಂಎನ್ಸಿಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನೂ ಸರ್ಕಾರ ಕಲ್ಪಿಸಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೂ ಜೀವ ಬಂದಿದ್ದು , ಇನ್ನೆರಡು ತಿಂಗಳಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ. ಮೂರ್ನಾಲ್ಕು ವರ್ಷಗಳಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದು ದೇಶಪಾಂಡೆ ಹೇಳಿದರು.
ಹೊಸ ಬಂದರುಗಳನ್ನು ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿದೆ. ಹೆದ್ದಾರಿಗಳ ನಿರ್ವಹಣೆಗೂ ಕ್ರಮ ಕೈಗೊಂಡಿದೆ. 2004 ರೊಳಗೆ ರಾಜ್ಯದ ಮಾಹಿತಿ ತಂತ್ರಜ್ಞಾನ ಉದ್ದಿಮೆಯ ರಫ್ತು 5 ಬಿಲಿಯನ್ ಡಾಲರ್ಗಳಿಗೆ ಹೆಚ್ಚುವ ಹಾಗೂ 2008 ರೊಳಗೆ 10 ಬಿಲಿಯನ್ ಡಾಲರ್ಗಳಿಗೆ ಮುಟ್ಟುವ ನಿರೀಕ್ಷೆಯಿದೆ. ಲೇಬರ್ ಲಾ ಸರಳಗೊಳಿಸಲು ಹಾಗೂ ಸ್ಪರ್ಧಾತ್ಮಕ ವ್ಯಾಪಾರಿ ಪರಿಸರವನ್ನು ರಾಜ್ಯದಲ್ಲಿ ಸೃಷ್ಟಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೇಶಪಾಂಡೆ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...