ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಷ್ಟ್ರಾದ್ಯಂತ ಪಂಪ ಜಯಂತಿ ಆಚರಿಸಲು ಕಮಲಾ ಹಂಪನಾ ಆಗ್ರಹ
ಹುಬ್ಬಳ್ಳಿ : ಆದಿಕವಿ ಪಂಪನ 1100ನೇ ಜನ್ಮ ದಿನವನ್ನು ರಾಷ್ಟ್ರಾದ್ಯಂತ ಆಚರಿಸುವ ವ್ಯವಸ್ಥೆ ಮಾಡಬೇಕು ಎಂದು ಸಾಹಿತಿ ಡಾ. ಕಮಲಾ ಹಂಪನಾ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಆಗ್ರಹವನ್ನು ಮುಂದಿಟ್ಟ ಹಂಪನಾ , 1902ನೇ ಇಸವಿಯಲ್ಲಿ ಪಂಪನ ಜನ್ಮದಿನದ ಸಹಸ್ರಮಾನೋತ್ಸವವನ್ನು ಆಚರಿಸುವುದು ಸಾಧ್ಯವಾಗಲಿಲ್ಲ. ಪಂಪ ಜಯಂತಿಗೆ 1100ನೇ ವರ್ಷ ತುಂಬಿದ ಈ ಸಂದರ್ಭದಲ್ಲಾದರೂ ಜನ್ಮದಿನೋತ್ಸವವನ್ನು ಆಚರಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿ ಮತ್ತು ವಿಶ್ವವಿದ್ಯಾಲಯಗಳು, ಸಂಘ ಸಂಸ್ಥೆಗಳು ಪಂಪ ಜಯಂತಿ ಉತ್ಸವಕ್ಕೆ ನೆರವಾಗಬೇಕು ಎಂದ ಕಮಲಾ ಹಂಪನಾ , ಕೆಲವು ಸಲಹೆಗಳನ್ನೂ ಸರಕಾರದ ಮುಂದಿಟ್ಟರು.
- ಪಂಪನ ಹಿರಿಯರು ಆಂಧ್ರಪ್ರದೇಶದ ನೆಲ್ಗೊಂಡ ಜಿಲ್ಲೆಗೆ ಸೇರಿದ್ದ ರಾಮಣ್ಣಪೆಟ್ ತಾಲೂಕಿನ ಮುನಿ ಪಂಪ ಎಂಬ ಊರಿನವರು. ಆದ್ದರಿಂದ ಪಂಪ ಜಯಂತಿಯನ್ನು ಆಂಧ್ರ ಪ್ರದೇಶ ಮತ್ತು ಕರ್ನಾಟಕ ಜಂಟಿಯಾಗಿ ಆಚರಿಸಬೇಕು. ಮೂರು ದಿನಗಳ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ದೆಹಲಿ ಹಾಗೂ ಹೈದರಾಬಾದಿನಲ್ಲಿ ನಡೆಸಬೇಕು.
- ಪಂಪನ ಸಹೋದರ ಜಿನವಲ್ಲಭ ಆಂಧ್ರದ ವೃಷಭ ಗಿರಿಯಲ್ಲಿ ಶಾಸನಗಳನ್ನು ಕೆತ್ತಿಸಿದ್ದಾನೆ. ಈ ಪ್ರದೇಶವನ್ನು ಎರಡೂ ರಾಜ್ಯಗಳು ಪ್ರವಾಸೀ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಬೇಕು.
- ಆದಿ ಕವಿ ಪಂಪನ ಅಂಚೆ ಚೀಟಿಯಾಂದನ್ನು ಹೊರ ತರಲು ಕರ್ನಾಟಕ ಸರಕಾರ ಕೇಂದ್ರದ ಅಂಚೆ ಇಲಾಖೆಯ ಮೇಲೆ ಒತ್ತಡ ತರಬೇಕು.
- ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ , ಒಂದು ವರ್ಷ ಪೂರ್ತಿ ಪಂಪನ ಸಾಕ್ಷ್ಯ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.
- ವಿಶ್ವ ವಿದ್ಯಾಲಯಗಳಲ್ಲಿ ಪಂಪನ ಕಾವ್ಯ ವಿನ್ಯಾಸದ ಪರಿಚಯ ಕಾರ್ಯಾಗಾರಗಳು ನಡೆಯಬೇಕು.
- ದೈನಿಕಗಳಲ್ಲಿ ಕಡ್ಡಾಯವಾಗಿ ಪಂಪನ ಉಕ್ತಿ ಬಳಸಬೇಕು.
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, January 10, 2002, 5:30 [IST]