ಮಂಗಳೂರು ವಿವಿ ಯುವಜೋತ್ಸವದಲ್ಲಿ ಕೇರಳ ವಿವಿಗೆ ಸಮಗ್ರ ಪ್ರಶಸ್ತಿ
*ವೇಣು ವಿನೋದ್ ಕೆ. ಎಸ್, ಸದಾಶಿವ ಕೆ.
ಮಂಗಳೂರು: ಕೋಣಾಜೆಯ ಮಂಗಳಗಂಗೋತ್ರಿಯಲ್ಲಿ ಬುಧವಾರ ಸಂಜೆ ಆತಿಥ್ಯದ ಸಂಭ್ರಮ. ದಕ್ಷಿಣ ಭಾರತ ಯುವಜನೋತ್ಸವ ಸಮಾರೋಪದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸುವ ಖುಷಿಯಲ್ಲಿ ವಿವಿಯ ವಿದ್ಯಾರ್ಥಿಗಳು ಅತ್ತಿಂದಿತ್ತ ಓಡಾಡುತ್ತಿದ್ದರು.
ಯುವಜನೋತ್ಸವದ ಸಮಗ್ರ ಪ್ರಶಸ್ತಿಯನ್ನು ಕೇರಳ ತಿರುವನಂತಪುರಂನ ವಿಶ್ವವಿದ್ಯಾಲಯಕ್ಕೆ ಲಭಿಸಿದೆ. ನಂತರದ ಸ್ಥಾನ ಕೇರಳದ ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವ ವಿದ್ಯಾಲಯಕ್ಕೆ. ಸಮಾರೋಪದ ವೇದಿಕೆಯಲ್ಲಿನ ಅತಿಥಿಗಳು ಕಾರ್ಪೊರೇಶನ್ ಬ್ಯಾಂಕ್ನ ನಿರ್ವಹಣಾ ನಿರ್ದೇಶಕ ಚೆರಿಯನ್ ವರ್ಗೀಸ್ ಮತ್ತು ಕರ್ನಾಟಕ ಬ್ಯಾಂಕ್ನ ಅಧ್ಯಕ್ಷ ಅನಂತ ಕೃಷ್ಣಯ್ಯ.
ಮುಖ್ಯಅತಿಥಿಗಳ ಸ್ಥಾನದಿಂದ ಮಾತನಾಡಿದ ಚೆರಿಯನ್ ವರ್ಗೀಸ್, ಪ್ರತಿಭೆಗೆ ಸೂಕ್ತ ಮಾರ್ಗದರ್ಶನವಿರಬೇಕು. ಆಧುನಿಕ ಸ್ಪರ್ಧಾ ಯುಗದಲ್ಲಿ ಪಠ್ಯೇತರ ಚಟುವಟಿಕೆಗೆಳನ್ನು ಪೋಷಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಯುವಜನೋತ್ಸವ, ವಿದ್ಯಾರ್ಥಿಗಳ ಯೋಚನೆಗಳ ವಿನಿಮಯಕ್ಕೆ ಉತ್ತಮ ವೇದಿಕೆಯಾಗುತ್ತವೆ ಎಂದರು. ಮಾನವ ಸಂಪನ್ಮೂಲ ಸಾಕಷ್ಟು ಇರುವುದರಿಂದ ಭಾರತ ದೇಶಕ್ಕೆ ಸಾಕಷ್ಟು ಗೌರವವಿದೆಯೇ ಹೊರತು ಪರಮಾಣು ಶಕ್ತಿಗಾಗಿ ಅಲ್ಲ ಎಂದು ಅವರು ಪ್ರತಿಪಾದಿಸಿದರು.
ವಿದ್ಯಾರ್ಥಿಗಳು ಗುಣಾತ್ಮಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ಅನಂತ ಕೃಷ್ಣಯ್ಯ ಕರೆ ಕೊಟ್ಟರು. ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಬಿ. ಹನುಮಯ್ಯ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು. ವಿವಿಯ ರಿಜಿಸ್ಟ್ರಾರ್ ಡಾ. ಬಿ.ಎ. ವಿವೇಕ ರೈ ಧನ್ಯವಾದ ಸಮರ್ಪಿಸಿದರು.
ಯುವಜನೋತ್ಸವದಲ್ಲಿ ಸಂಗೀತ ಟ್ರೋಫಿ ಯನ್ನು ಕೇರಳ ವಿವಿ ಗೆದ್ದುಕೊಂಡರೆ, ನೃತ್ಯ ಟ್ರೋಫಿ ಮೈಸೂರು ವಿವಿಗೆ ಸಂದಿತು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಬಗಲಿಗೆ ಸಾಹಿತ್ಯ ಟ್ರೋಫಿ, ರಂಗಭೂಮಿಯ ಬಹುಮಾನ ಭಾರತೀದಾಸನ್ ವಿಶ್ವ ವಿದ್ಯಾಲಯಕ್ಕೆ ಲಭಿಸಿದೆ. ಐದು ದಿನಗಳ ಯುವಜನೋತ್ಸವದಲ್ಲಿ 31 ವಿಶ್ವವಿದ್ಯಾಲಯಗಳಿಂದ 953 ಸ್ಪರ್ಧಿಗಳು ಭಾಗವಹಿಸಿದ್ದರು.
ರಾಷ್ಟ್ರೀಯ ಯುವಜನೋತ್ಸವವು ಫೆಬ್ರವರಿ 1ರಿಂದ 5ರವರೆಗೆ ಅಮೃತಸರದ ಗುರುನಾನಕ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ ಎಂದು ಭಾರತೀಯ ವಿಶ್ವವಿದ್ಯಾಲಯಗಳ ಸಂಘಟನೆಯ ಹಿರಿಯ ಸಾಂಸ್ಕೃತಿಕ ಅಧಿಕಾರಿ ಸಾಮ್ಸನ್ ಡೇವಿಡ್ ಇದೇ ಸಂದರ್ಭದಲ್ಲಿ ಘೋಷಿಸಿದರು.
ಮುಖಪುಟ / ಇವತ್ತು... ಈ ಹೊತ್ತು...