ಗಾಂಧಿಯಾಂದಿಗೆ ಚರಕ ಹಿಡಿದ ಹಿರಿಯರಿಗೆ ಪಿಂಚಣಿ- ಎಸ್.ಎಂ.ಕೃಷ್ಣ
ಬೆಂಗಳೂರು : ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮಗಾಂಧಿ ಅವರೊಂದಿಗೆ ಚರಕ ಕ್ರಾಂತಿಯಲ್ಲಿ ಕೈಜೋಡಿಸಿ, ರಾಷ್ಟ್ರದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯರಿಗೆ, ಸ್ವಾತಂತ್ರ್ಯ ಯೋಧರಿಗೆ ನೀಡುವ ಪಿಂಚಣಿ ಮಾದರಿಯಲ್ಲಿ ಪಿಂಚಣಿ ನೀಡುವುದಾಗಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರಕಟಿಸಿದ್ದಾರೆ.
ಗುರುವಾರ ಬೆಂಗಳೂರಿನ ಕೋಟೆ ಹೈಸ್ಕೂಲ್ ಆವರಣದಲ್ಲಿ ಪ್ರಾರಂಭವಾದ ರಾಷ್ಟ್ರೀಯ ಖಾದಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು- ಖಾದಿ ಉದ್ಯಮ ಸೇರಿದಂತೆ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು ಸರ್ಕಾರ ಹಾಗೂ ಸಮಾಜದ ಕರ್ತವ್ಯ ಎಂದರು. ಫೆ. 8ರವರೆಗೆ ಖಾದಿ ಉತ್ಸವ ನಡೆಯಲಿದೆ.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಉತ್ಪನ್ನಗಳಿಗೆ ವರ್ಷಕ್ಕೆ 90 ದಿನಗಳ ಕಾಲ ರಾಜ್ಯ ಸರ್ಕಾರ ನೀಡುತ್ತಿದ್ದ ಸಬ್ಸಿಡಿಯನ್ನು ಪ್ರತಿಶತ 10 ರಿಂದ 20 ಕ್ಕೆ ಹೆಚ್ಚಿಸುವುದಾಗಿ ಕೃಷ್ಣ ಘೋಷಿಸಿದರು. ಖಾದಿ ಉತ್ಪನ್ನಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಶೇ.20 ರಿಯಾಯಿತಿ ನೀಡುತ್ತದೆ. ರಾಜ್ಯ ಸರ್ಕಾರ ಕೂಡ ತಾನು ನೀಡುತ್ತಿರುವ ಸಬ್ಸಿಡಿಯನ್ನು ಶೇ.10 ರಿಂದ 20 ಕ್ಕೆ ಹೆಚ್ಚಿಸುವುದಾಗಿ ಅವರು ಹೇಳಿದರು.
ಖಾದಿ ಉದ್ಯಮಕ್ಕೆ ಬೇಕಿದೆ ಆಧುನಿಕತೆಯ ರಂಗು
ಖಾದಿ ಉತ್ಪನ್ನಗಳನ್ನು ಸಮಕಾಲೀನ ಅಗತ್ಯ- ಅಭಿರುಚಿಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಬೇಕಿದೆ. ಖಾದಿ ಉದ್ಯಮ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಬೇಕು ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.
ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಶಾಶ್ವತ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಏರ್ಪಡಿಸುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಅದಕ್ಕಾಗಿ ಸೂಕ್ತ ಸ್ಥಳವನ್ನು ಗೊತ್ತುಪಡಿಸಲು ಸಣ್ಣ ಕೈಗಾರಿಕಾ ಸಚಿವರಿಗೆ ಸೂಚಿಸಿದರು.
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಣ್ಣ ಕೈಗಾರಿಕಾ ಸಚಿವ ಕಾಶಪ್ಪನವರ್, ಮಾಹಿತಿ ತಂತ್ರಜ್ಞಾನ ಸಚಿವ ಬಿ.ಕೆ.ಚಂದ್ರಶೇಖರ್, ಅಖಿಲ ಭಾರತ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಶ್ರೀರಂಗದೇವರಾಯಲು, ಖಾದಿ ಉತ್ಸವ ಸಂಘಟನಾ ಸಮಿತಿ ಅಧ್ಯಕ್ಷ ಹಾರನಹಳ್ಳಿ ರಾಮಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...