ಸವಾಲಿನ ತ್ರೆೃಮಾಸಿಕದಲ್ಲೂ ಮುಂದುವರಿದ ಇನ್ಫೋಸಿಸ್ ನಾಗಾಲೋಟ
ಬೆಂಗಳೂರು: ಲಾಭ ಗಳಿಕೆಯಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಇನ್ಫೋಸಿಸ್ ಟೆಕ್ನಾಲಜೀಸ್ ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೆೃಮಾಸಿಕ ಅವಧಿಯಲ್ಲಿ 206.04 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಪನಿಯ ಲಾಭಾಂಶದಲ್ಲಿ ಶೇ.23.87 ರಷ್ಟು ಹೆಚ್ಚಳವಾಗಿದೆ.
ಇನ್ಫೋಸಿಸ್ ಹಾಗೂ ಭಾರತೀಯ ಸಾಫ್ಟ್ವೇರ್ ಉದ್ದಿಮೆ ಎರಡಕ್ಕೂ ಈ ತ್ರೆೃಮಾಸಿಕ ಸವಾಲಿನ ಅವಧಿಯಾಗಿತ್ತು ಎಂದು ಇನ್ಫೋಸಿಸ್ ಸಿಇಓ ಎನ್.ಆರ್.ನಾರಾಯಣ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 31 ಕ್ಕೆ ಕೊನೆಗೊಂಡ ವರ್ಷದ 9 ತಿಂಗಳುಗಳ ವಿತ್ತ ವರದಿಗಳನ್ನು ಮಂಡಳಿಯ ನಿರ್ದೇಶಕರು ಅಂಗೀಕರಿಸಿದ ನಂತರ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೆಪ್ಟಂಬರ್ 11 ರ ನಂತರ ಸಾಫ್ಟ್ವೇರ್ ಕ್ಷೇತ್ರದ ಮೇಲೆ ಕವಿದ ಕಾರ್ಮೋಡ ಹಾಗೂ ಅನಿಶ್ಚತತೆ ಮುಂದುವರಿದಿದ್ದು , ನಾವೆಲ್ಲರು ದೀರ್ಘಕಾಲೀನ ಅವಕಾಶಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಳೆದ ತ್ರೆೃಮಾಸಿಕ ಅವಧಿಯಲ್ಲಿ ಸನ್ ಅಮೆರಿಕ ಐಎನ್ಸಿ., ಐಝ್ವ ಕೊಟ್ಜು ಹಾಗೂ ಟಾರ್ಗೆಟ್ ಕಾರ್ಪೊರೇಷನ್ ಸೇರಿದಂತೆ 33 ಹೊಸ ಗಿರಾಕಿಗಳನ್ನು ಇನ್ಫೋಸಿಸ್ ಪಡೆದಿದೆ ಎಂದೂ ಕಂಪನಿಯ ಪ್ರಕಟಣೆ ತಿಳಿಸಿದೆ.
ನೂತನ ಸಿಇಓ ಆಗಿ ನಂದನ್ ನೀಲೇಕಣಿ : ಮಾರ್ಚ್ 31 ರಿಂದ ಇನ್ಫೋಸಿಸ್ನ ನೂತನ ಸಿಇಓ ಆಗಿ ನಂದನ್ ನೀಲೇಕಣಿ ಅವರನ್ನು ನಿರ್ದೇಕರ ಮಂಡಳಿ ಆರಿಸಿದೆ. ಪ್ರಸ್ತುತ ಸಿಇಓ ಆಗಿರುವ ಎನ್.ಆರ್.ನಾರಾಯಣ ಮೂರ್ತಿ ಅವರು ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯುವರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...