ಬೆಲೆ ಏರಿಕೆಯ ಸರದಿ ಈಗ ಕೆ.ಎಂ.ಎಫ್. ಹಾಲಿನದು !
ಬೆಂಗಳೂರು : ಹೊಸವರ್ಷದ ಕೊಡುಗೆಯಾಗಿ ಬೆಂಗಳೂರು ಜಲ ಮಂಡಳಿ ಮೊನ್ನೆ ಮೊನ್ನೆಯಷ್ಟೇ ನೀರಿನ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಿದ ಬೆನ್ನಲ್ಲೇ ಕೆ.ಎಂ.ಎಫ್ನಿಂದ ಪೂರೈಸಲಾಗುವ ಹಾಲಿನ ದರ ಗಗನಕ್ಕೇರುವ ಸೂಚನೆಯನ್ನು ಸಚಿವರು ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ರಾಜ್ಯದ ಸಕ್ಕರೆ ಹಾಗೂ ಪಶುಸಂಗೋಪನೆ ಖಾತೆ ಸಚಿವ ಎ. ಕೃಷ್ಣಪ್ಪ ಅವರು ಕೆ.ಎಂ.ಎಫ್. ಹಾಲಿನ ದರವನ್ನು ಅತಿ ಶೀಘ್ರದಲ್ಲೇ ಏರಿಸುವ ಸಾಧ್ಯತೆಗಳ ಬಗ್ಗೆ ತಿಳಿಸಿದರು.
ಹಾಲಿನ ಬೆಲೆ ಏರಿಕೆ ಸಂಬಂಧ ಚರ್ಚೆಗಳು ನಡೆದಿದ್ದು, ಯಾವುದೇ ಕ್ಷಣದಲ್ಲಿ ದರ ಏರಿಕೆಯ ಪ್ರಕಟಣೆ ಹೊರಬೀಳಬಹುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಆದರೆ, ಹಾಲಿನ ದರವನ್ನು ಎಷ್ಟು ಹೆಚ್ಚಿಸಲಾಗುವುದು ಎಂಬುದನ್ನು ತಿಳಿಸಲು ಅವರು ನಿರಾಕರಿಸಿದರು.
ಗ್ರಾಹಕರಿಂದ ಯಾವುದೇ ಆರೋಪಗಳು ಬಾರದಂತೆ, ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವಂತೆ ಕೆ.ಎಂ.ಎಫ್ಗೆ ಸೂಚಿಸಲಾಗಿದೆ ಎಂದೂ ಸಚಿವರು ಹೇಳಿದರು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೆಂಗಳೂರಿನಲ್ಲಿ ಪೂರೈಕೆಯಾದ ಹಾಲು ಕಹಿಯಾಗಿ, ದುರ್ನಾತ ಬೀರುತ್ತಿತ್ತು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕೂಡ ವಿದ್ಯುತ್ ದರ ಏರಿಸಲು ತುದಿಗಾಲಿನಲ್ಲಿ ನಿಂತಿದೆ. ಆದರೆ, ಸರಕಾರ, ಕನಕಪುರ ಉಪ ಚುನಾವಣೆ ಮುಗಿಯುವ ತನಕ ಮತದಾರರಿಗೆ ವಿದ್ಯುದಾಘಾತ ನೀಡಲು ಸಿದ್ಧವಿಲ್ಲ ಎಂಬುದು ವಿಶ್ವಸನೀಯ ಮೂಲಗಳ ವರದಿ.
(ಪಿ.ಟಿ.ಐ/ಇನ್ಫೋವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...