ಫೆ.14 ರಿಂದ ತುಮಕೂರು ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಕರೀಂಖಾನ್?
ತುಮಕೂರು: 69 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 1 ರ ಬದಲು ಫೆ.14 ರಿಂದ ನಡೆಯಲಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಹೊಸ ವೇಳಾಪಟ್ಟಿಯ ಪ್ರಕಾರ ನಾಲ್ಕು ದಿನಗಳ ಕಾಲ ನಡೆಯುವ ಅದ್ದೂರಿ ಸಾಹಿತ್ಯ ಸಮ್ಮೇಳನವು ಫೆ. 14 ರಂದು ಪ್ರಾರಂಭವಾಗಿ ಫೆ. 17ರಂದು ಕೊನೆಗೊಳ್ಳುವುದು ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಚಂದ್ರ ಹೇಳಿದರು. ಸಮ್ಮೇಳನದ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜರುಗಿದ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಫೆ. 14 ರಂದು ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆದರೆ, 15 ರಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಮ್ಮೇಳನವನ್ನು ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಕನ್ನಡಭವನದ ಶಂಕು ಸ್ಥಾಪನೆಯನ್ನು ಮುಖ್ಯಮಂತ್ರಿಗಳು ನೆರವೇರಿಸುವರು. ಫೆ. 17 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನದ ಯಶಸ್ಸಿಗೆ ಸರ್ವ ಸಿದ್ಧತೆಗಳೂ ನಡೆಯುತ್ತಿವೆ ಎಂದು ಜಯಚಂದ್ರ ಹೇಳಿದರು.
ಸಮ್ಮೇಳನ ಮುಂದಕ್ಕೆ, ಪುನರೂರು ಒಪ್ಪುವರೇ?
ತುಮಕೂರು ಸಾಹಿತ್ಯ ಸಮ್ಮೇಳನ ನಡೆಯುವ ದಿನಾಂಕ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಿಮಿಸಿರುವುದು ಈಗ ಬಯಲಾಗಿದೆ. ಫೆ. 14 ರಿಂದ ಸಮ್ಮೇಳನ ಆರಂಭವಾಗುತ್ತದೆಂದು ಕೃಷಿ ಸಚಿವ ಜಯಚಂದ್ರ ಹೇಳುತ್ತಿದ್ದರೂ, ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಫೆ. 1 ರಿಂದಲೇ ಸಮ್ಮೇಳನ ನಡೆಯುತ್ತದೆಂದು ಹೇಳುತ್ತಿದ್ದಾರೆ.
ಸಮ್ಮೇಳನವನ್ನು ಮುಂದೂಡುವ ಹಕ್ಕು ಕಸಾಪದ ಸ್ಥಳೀಯ ಘಟಕಗಳಿಗಿಲ್ಲ . ಕೇಂದ್ರ ಕಸಾಪ ಗಮನಕ್ಕೆ ತಾರದಂತೆ ಇಂಥ ತೀರ್ಮಾನಗಳನ್ನು ಯಾರೂ ಕೈಗೊಳ್ಳುವಂತಿಲ್ಲ ಎನ್ನುವುದು ಪುನರೂರು ವಾದ. ಈ ಮುಸುಕಿನ ಗುದ್ದಾಟದ ಕಾರಣದಿಂದಾಗಿ ಫೆ.14 ಕ್ಕೆ ಸಮ್ಮೇಳನವನ್ನು ಮುಂದೂಡಲು ಪುನರೂರು ಒಪ್ಪುವರೇ ಎನ್ನುವ ವಿಷಯ ಕುತೂಹಲ ಮೂಡಿಸಿದೆ.
ಬುಧವಾರ ಸಮ್ಮೇಳನಾಧ್ಯಕ್ಷರ ಆಯ್ಕೆ
ಜನವರಿ 9 ರ ಬುಧವಾರ ತುಮಕೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜರುಗುವ ನಿರೀಕ್ಷೆಯಿದೆ. ಕರೀಂಖಾನ್, ಗೌರೀಶ ಕಾಯ್ಕಿಣಿ, ದೇವನೂರು ಮಹಾದೇವ, ಕಮಲಾ ಹಂಪಾನಾ, ದಲಿತ ಕವಿ ಸಿದ್ಧಲಿಂಗಯ್ಯ ಮುಂತಾದವರ ಹೆಸರುಗಳು ಸಮ್ಮೇಳನಾಧ್ಯಕ್ಷರ ಪೀಠಕ್ಕೆ ಕೇಳಿಬರುತ್ತಿವೆ. ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಕರೀಂಖಾನ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲು ಒಲವು ಹೊಂದಿದ್ದಾರೆ ಎನ್ನಲಾಗಿದೆ.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...