ಮನೆ ಬಾಗಿಲಲ್ಲಿ ಕವಿ ಗೀತ, ಉಪಾಸನಿಗಳ ಸುಗಮ ಸಂಗೀತ
ಬೆಂಗಳೂರು : ಹೆಸರಾಂತ ಕವಿ ನುಡಿಗಳ ಮನೆ ಮನಕ್ಕೆ ಮುಟ್ಟಿಸಲು ಸುಗಮ ಸಂಗೀತ ಶಾಲೆ ಉಪಾಸನ ಟೊಂಕ ಕಟ್ಟಿದೆ. ಈ ನಿಟ್ಟಿನಲ್ಲಿ ಅದು ಮಾಡಲು ಹೊರಟಿರುವುದು ನಗರದ ನಿಮ್ಮ ಮನೆಗೆ ಬಂದು ಹಾಡುವುದು; ನೀವು ಬಯಸಿದಲ್ಲಿ. ಈ ಸಂಗೀತ ಯೋಜನೆಯ ಹೆಸರು ಗೀತ ವಾಹಿನಿ.
ಪ್ರತಿ ತಿಂಗಳ ಮೊದಲ ಶನಿವಾರ ಬಯಸಿದವರ ಮನೆಗೆ ಸಂಗೀತ ಉಪಾಸನಿಗಳು ಹಾಜರ್. ಸುಮಾರು ಎರಡು ತಾಸು ಗಾನ ಸುಧೆ. ಕನ್ನಡದ ಕವಿ ಕಾವ್ಯಗಳ ಸುಮಾರು 20 ಹಾಡುಗಳು ನಿಮ್ಮ ಪಾಲಿಗೆ. ಮೊನ್ನೆಯಷ್ಟೇ (2002ರ ಮೊದಲ ಶನಿವಾರ) ಕವಿ ಜಿ.ಎಸ್.ಶಿವರುದ್ರಪ್ಪನವರ ಮನೆಯಲ್ಲಿ ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ಹಾಡುವುದರೊಂದಿಗೆ ‘ಉಪಾಸನಾ’ದ ಈ ಯೋಜನೆಗೆ ಚಾಲನೆ ದೊರೆಯಿತು.
ಸುಬ್ಬಣ್ಣ ತೋರಿದ ಹಾದಿಯಲ್ಲಿ ಅರ್ಚನ ಉಡುಪ, ಮೇದಿನಿ ದತ್ ಹಾಗೂ ಜಿ.ಮೋಹನ್ ಒಂದರ ನಂತರ ಒಂದರಂತೆ ಕುವೆಂಪು, ಜಿಎಸ್ಎಸ್, ಗೋಪಾಲಕೃಷ್ಣ ಅಡಿಗ, ಕೆಎಸ್ನ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್.ವೆಂಕಟೇಶ ಮೂರ್ತಿ ಹಾಗೂ ಬಿ.ಆರ್.ಲಕ್ಷ್ಮಣ ರಾವ್ ಕವನಗಳನ್ನು ಹಾಡಾಗಿಸಿದರು. ಗಾಯಕರಾದ ಸಿ.ಅಶ್ವಥ್, ಎನ್.ಎಸ್.ಉಡುಪ, ವೈ.ಕೆ.ಮುದ್ದುಕೃಷ್ಣ, ಗರ್ತಿಕೆರೆ ರಾಘಣ್ಣ, ರಂಗ ಕರ್ಮಿ ಸಿ.ಆರ್.ಸಿಂಹ ಪ್ರೇಕ್ಷಕರ ಸಾಲಿನಲ್ಲಿ ಕೂತಿದ್ದರು.
ಕವಿ ಗಾನ ಸವಿವ ಮನಸ್ಸು ನಿಮ್ಮದೂ ಆಗಿದ್ದಲ್ಲಿ, ನಿಮ್ಮ ಮನೆಯಲ್ಲೂ ಒಂದು ಶನಿವಾರ ಸಂಗೀತ ಸಂಜೆ ನಡೆಯಲಿ. ಅದಕ್ಕೆ ನೀವು ಮೋಹನ್ ಅವರನ್ನು ಸಂಪರ್ಕಿಸಬೇಕು. ಅವರ ಮೊಬೈಲ್ ನಂಬರ್: 98451-66957.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...