ಸಂಪುಟ ವಿಸ್ತರಣೆಗೂ ಸಿದ್ಧಗಂಗೆ ಸ್ವಾಮೀಜಿಗೂ ಸಂದ ಸಂಬಂಧ
ಬೆಂಗಳೂರು : ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಪ್ರಾರಂಭವಾಗುವ ಜನವರಿ 21ಕ್ಕೆ ಮುನ್ನವೇ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಂಪುಟವನ್ನು ವಿಸ್ತರಿಸಲಿದ್ದು, ಅದರ ಪೂರ್ವ ಚಟುವಟಿಕೆಗಳು ಭರದಿಂದ ಸಾಗಿವೆ.
ತುಮಕೂರಿನ ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮಿಯವರೊಡನೆ ಮುಖ್ಯಮಂತ್ರಿಗಳು ಮಂಗಳವಾರ ಬೆಳಗ್ಗೆ ಗುಪ್ತ ಸಮಾಲೋಚನೆಯನ್ನೂ ನಡೆಸಿದ ವರದಿಯಾಗಿದೆ. ಈ ಸಮಾಲೋಚನೆಗೂ ಸಚಿವ ಸಂಪುಟ ವಿಸ್ತರಣೆಗೂ ಸಂಬಂಧ ಇರುವ ಬಗೆಗೊ ಮಾತುಗಳೂ ಕೇಳಿಬರುತ್ತಿವೆ.
ಲಿಂಗಾಯಿತ, ಒಕ್ಕಲಿಗ ಹಾಗೂ ಕುರುಬ ಕೋಮಿನಿಂದ ತಲಾ ಒಬ್ಬೊಬ್ಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ. ಸೋಮಣ್ಣ ಹಾಗೂ ಎಂ.ವಿ.ರಾಜಶೇಖರನ್ ಸಚಿವ ಗಾದಿಗೆ ಕೇಳಿಬರುತ್ತಿರುವ ಲಿಂಗಾಯಿತ ಕೋಮಿನ ಹೆಸರುಗಳು. ಒಕ್ಕಲಿಗರ ಕೋಮಿನಿಂದ ರಾಮಲಿಂಗಾ ರೆಡ್ಡಿ ಹಾಗೂ ಕುರುಬ ಕೋಮಿನಿಂದ ರೇವಣ್ಣ ಆಯ್ಕೆಯಾಗುವುದು ಖಚಿತ ಎನ್ನಲಾಗುತ್ತಿದೆ.
ಲಿಂಗಾಯಿತ ಕೋಮಿನ ಸಚಿವರುಗಳಿಗೆ ಸಾಧಾರಣ ಅನ್ನುವಂಥ ಖಾತೆಗಳನ್ನು ಕೊಟ್ಟಿರುವುದರ ಬಗೆಗೆ ಪಕ್ಷದಲ್ಲಿ ಅಪಸ್ವರ ಎದ್ದಿದೆ. ಈ ಬಿಕ್ಕಟ್ಟು ಕಳೆದ ವಾರದಿಂದ ಚುರುಕಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿಯೇ ಸಿದ್ಧಗಂಗೆ ಸ್ವಾಮೀಜಿ ಜೊತೆ ಮುಖ್ಯಮಂತ್ರಿಗಳು ಚರ್ಚಿಸಿದ್ದು ಎಂಬ ಮಾತು ರಾಜಕೀಯ ವಲಯದಲ್ಲಿ ಎದ್ದಿದೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ