ಛತ್ರಪತಿ ಶಿವಾಜಿಗೆ ಜೀಜಾ ಬಾಯಿ ಕನ್ನಡದಲ್ಲಿ ಕತೆ ಹೇಳಿದಳೇ...?
ಧಾರವಾಡ : ಛತ್ರಪತಿ ಶಿವಾಜಿಯ ತಾಯಿ ಜೀಜಾ ಬಾಯಿ ಅವರ ತವರೂರು ಕರ್ನಾಟಕವಾಗಿತ್ತು. ಆದ್ದರಿಂದ ಕನ್ನಡ ಮತ್ತು ಮರಾಠಿ ಭಾಷೆಗಳ ನಡುವೆ ಅವಿನಾಭಾವ ಸಂಬಂಧ ಇದೆ ಎಂಬ ಹೊಸ ತರ್ಕವನ್ನು ಪುಣೆಯ ಭಂಡಾರಕಾರ ಸಂಶೋಧನಾ ಸಂಸ್ಥೆಯ ಕಾರ್ಯದರ್ಶಿ ಡಾ. ಎಂ. ಜಿ. ಧಡಫಲೆ ಮಂಡಿಸಿದ್ದಾರೆ.
ಅವರು ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆ ಮತ್ತು ನಗರದ ಮಾನವ ಧರ್ಮ ಪ್ರತಿಷ್ಠಾನ ಇತ್ತೀಚೆಗೆ ಆಯೋಜಿಸಿದ್ದ ‘ಶಂಬಾ ಜೋಶಿ ದೃಷ್ಟಿಯಲ್ಲಿ ಕರ್ನಾಟಕ ಮಹಾರಾಷ್ಟ್ರ ಸಂಬಂಧ’ ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಶಿವಾಜಿಯ ತಾಯಿ ಕನ್ನಡದವಳಾಗಿದ್ದರಿಂದ ಆತನಿಗೆ ಕನ್ನಡ ಭಾಷೆಯ ಮೇಲೆ ಅತೀವ ಅಭಿಮಾನವಿತ್ತು. ಆತನ ತಂದೆ ಶಾಹಾಜಿ ಭೋಸಲೆ , ಬಿಜಾಪುರ ಸುಲ್ತಾನರ ದರಬಾರಿನಲ್ಲಿ ಮಂತ್ರಿಯಾಗುವುದಕ್ಕೆ ಮುಂಚೆ ಬೆಂಗಳೂರು ಪ್ರಾಂತ್ಯದ ಗವರ್ನರಾಗಿದ್ದರು. ಹೀಗಾಗಿ ಮರಾಠಿ ಭಾಷೆಯಲ್ಲಿ ಕನ್ನಡ ಪದಗಳನ್ನು ನಿರರ್ಗಳವಾಗಿ ಬಳಸಲಾಗಿದೆ ಎಂದು ಧಡಫಲೆ ಹೇಳಿದರು.
ಇದ ಸಂದರ್ಭದಲ್ಲಿ ಮಾತನಾಡಿದ ಇತಿಹಾಸ ತಜ್ಞ ಡಾ. ಡಿ. ಎಸ್. ದೀಕ್ಷಿತ್ ಕೂಡ, ತನ್ನ ಮಗ ರಾಜಾರಾಮನಿಗೆ ವಿಜಯನಗರದ ಪಟ್ಟ ಕಟ್ಟುವ ಇಂಗಿತ ಶಿವಾಜಿಗಿತ್ತು ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಡಾ.ಎಸ್. ಕೆ. ಜೋಶಿ ಹಾಗೂ ಕನ್ನಡ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಂ. ಎಂ. ಸಜ್ಜನರ ಅವರನ್ನು ಸನ್ಮಾನಿಸಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...