ಕುವೆಂಪು ಸ್ಫೂರ್ತಿ ತಾಣದ ಸಂರಕ್ಷಣೆಗೆ ಕುಕ್ಕರಹಳ್ಳಿಯಲ್ಲಿ ಜನಜಾಗೃತಿ ಜಾಥಾ
ಮೈಸೂರು : ರಾಷ್ಟ್ರಕವಿ ಕುವೆಂಪು ಅವರಿಗೆ ಸ್ಫೂರ್ತಿಯ ತಾಣವಾಗಿದ್ದ ಮೈಸೂರಿನ ಸುಪ್ರಸಿದ್ಧ ಕುಕ್ಕರ ಹಳ್ಳಿ ಕೆರೆ ಇಂದು ವಿನಾಶದ ಅಂಚಿನಲ್ಲಿದೆ. ಕಳೆದ ಜುಲೈನಲ್ಲಿ ಕೆರೆಯ ನೀರು ಕಲುಷಿತಗೊಂಡಿದ್ದರಿಂದ ಲಕ್ಷಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿದ್ದವು.
ಈ ಕೆರೆಯನ್ನು ಸಂರಕ್ಷಿಸುವಂತೆ ಇಲ್ಲಿನ ನಾಗರಿಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ಕೆರೆ ಮೈಸೂರು ವಿಶ್ವವಿದ್ಯಾಲಯದ ಉಸ್ತುವಾರಿಯಲ್ಲಿದೆ. ಈ ಐತಿಹಾಸಿಕ ಕೆರೆಯನ್ನು ಸಂರಕ್ಷಿಸುವಂತೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವಂತೆ ಜನಜಾಗೃತಿ ಮೂಡಿಸಲು ವಿವಿಧ ಸಂಘಟನೆಗಳು ಕುಕ್ಕರಹಳ್ಳಿಯಲ್ಲಿ ಜನಜಾಗೃತಿ ಜಾಥಾ ನಡೆಸಿದವು.
ಜ್ಞಾನ ವಿಜ್ಞಾನ ವೇದಿಕೆ, ಧ್ವನ್ಯಾಲೋಕ, ಬೃಂದಾವನ ಬಡಾವಣೆ ನಾಗರಿಕರು ಹಾಗೂ ಮೈಸೂರು ಪರಿಸರ ಪ್ರತಿಷ್ಠಾನದ ಕಾರ್ಯಕರ್ತರು ಈ ಜಾಥಾದಲ್ಲಿ ಪಾಲ್ಗೊಂಡು, ಮನೆ ಮನೆಗೂ ತೆರಳಿ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸುವ ಕರಪತ್ರಗಳನ್ನು ಹಂಚಿದರು.
ನಂತರ ನಡೆದ ಗಣ್ಯರ ಸಭೆಯಲ್ಲಿ ಕುಕ್ಕರಹಳ್ಳಿ ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ನಿಯೋಗದಲ್ಲಿ ತೆರಳಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಯಿತು. ಮಾಜಿ ಸಂಸದ ತುಳಸೀದಾಸ್ ದಾಸಪ್ಪ, ಮಾಜಿ ಮೇಯರ್ ನರಸಿಂಹ ಅಯ್ಯಂಗಾರ್, ವಿಜ್ಞಾನಿ ಜಗನ್ನಾಥ್, ಪ್ರೊ. ಜಯರಾಮಯ್ಯ, ಪ್ರೊ. ರವಿಕುಮಾರ್, ಆರ್. ಲಿಂಗಪ್ಪ ಅವರನ್ನೊಳಗೊಂಡ ನಿಯೋಗವನ್ನೂ ಈ ಸಂದರ್ಭದಲ್ಲಿ ರಚಿಸಲಾಯಿತು.
ಈ ನಿಯೋಗವು ರಾಜ್ಯದ ಮುಖ್ಯಮಂತ್ರಿ, ಮೈಸೂರು ವಿವಿಯ ಕುಲಪತಿ, ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ, ಕೆರೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮನವೊಲಿಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...