ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬ್ಲೇರ್ಗೆ ಆತ್ಮೀಯ ಬೀಳ್ಕೊಡುಗೆ
ಬೆಂಗಳೂರು: ಮೂರು ದಿನದ ಬೆಂಗಳೂರು ಭೇಟಿಯನ್ನು ಮುಗಿಸಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್, ಬ್ರಿಟಿಷ್ ಏರ್ವೇಸ್ನ ವಿಶೇಷ ವಿಮಾನದಲ್ಲಿ ಭಾನುವಾರ ಬೆಳಗ್ಗೆ ಹೈದರಾಬಾದ್ನತ್ತ ಪ್ರಯಾಣ ಬೆಳೆಸಿದರು. ಭಾನುವಾರ ಸಂಜೆಯೇ ಅವರು ಹೈದರಾಬಾದ್ನಿಂದ ದೆಹಲಿಗೆ ತೆರಳಲಿದ್ದಾರೆ.
ರಾಜ್ಯದ ರಾಜ್ಯಪಾಲರಾದ ವಿ.ಎಸ್. ರಮಾದೇವಿ, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಉನ್ನತ ಅಧಿಕಾರಿಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೋನಿ ಬ್ಲೇರ್ ದಂಪತಿಗಳಿಗೆ ಆತ್ಮೀಯವಾಗಿ ಬೀಳ್ಕೊಟ್ಟರು. ಆರು ದಿನಗಳ ಭಾರತ ಪ್ರವಾಸಾವಧಿಯಲ್ಲಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಟೋನಿ ಬ್ಲೇರ್ ಅವರು, ಸಿಐಐ ಆಶ್ರಯದ ಪಾಲುದಾರಿಕೆ ಶೃಂಗಸಭೆ-2002ನಲ್ಲಿ ಶನಿವಾರ ಭಾಗವಹಿಸಿದ್ದರು.
ಬೆಂಗಳೂರಿಗರ ಕ್ಷಮೆ ಕೋರಿದ ಬ್ಲೇರ್: ತಮ್ಮ ಆಗಮನದಿಂದ ಬೆಂಗಳೂರು ನಗರವಾಸಿಗಳಿಗೆ ಆದ ಅನನುಕೂಲಕ್ಕಾಗಿ ಟೋನಿ ಬ್ಲೇರ್ ಕ್ಷಮೆ ಯಾಚಿಸಿದ್ದಾರೆ. ಶನಿವಾರ ಪಾಲುದಾರಿಕೆ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಭದ್ರತೆಯ ದೃಷ್ಟಿಯಿಂದ ಬೆಂಗಳೂರು ನಾಗರಿಕರು ಅನುಭವಿಸಿದ ಟ್ರಾಫಿಕ್ ತೊಂದರೆಗೆ ವಿನಮ್ರವಾಗಿ ಕ್ಷಮೆಯಾಚಿಸಿ ತಮ್ಮ ದೊಡ್ಡತನ ಮೆರೆದರು.
ಬೆಂಗಳೂರು ಸುತ್ತಿ ಬಂದ ಚೆರ್ರಿ: ಅತ್ತ ಟೋನಿ ಅವರು, ಪಾಲುದಾರಿಕೆ ಶೃಂಗದಲ್ಲಿ ತಲ್ಲೀನರಾಗಿದ್ದರೆ, ಇತ್ತ ಅವರ ಪತ್ನಿ ಚೆರ್ರಿ ಬ್ಲೇರ್ ಬೆಂಗಳೂರನ್ನೊಂದು ಪುಟ್ಟ ರೌಂಡ್ ಹಾಕಿಬಂದರು. ಕೊಡಿಗೆಹಳ್ಳಿಯ ಕೊಳಚೆ ಪ್ರದೇಶಗಳ ಅಭಿವೃದ್ಧಿಗಾಗಿ ಮೀಸಲಾದ ಕ್ರಿಸ್ಟಲ್ ಹೌಸ್ (ಬ್ರಿಟಿಷ್ ಸಂಸ್ಥೆ), ನ್ಯಾಷನಲ್ ಲಾ ಶಾಲೆಗೆ ಭೇಟಿ ನೀಡಿದ ಚೆರ್ರಿ ಅವರು, ಬಸವನಗುಡಿಯ ದೊಡ್ಡ ಗಣೇಶ ಹಾಗೂ ಬಸವಣ್ಣನ ದರ್ಶನ ಮಾಡಿ ಪೂಜೆ ಸಲ್ಲಿಸಿದರು.
(ಇನ್ಫೋ ವಾರ್ತೆ/ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...