ಕಾಶ್ಮೀರ ಗಡಿಯಲ್ಲಿ ಬೆಳಗಾವಿಯ ಯೋಧನ ವೀರಮರಣ
ಬೆಳಗಾವಿ : ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷಾರಫ್ ಅವರ ಸ್ನೇಹದ ಮಾತುಗಳು ಕೃತಿಗಳಿಯಬೇಕು. ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಬೇಕು ಎಂಬ ಭಾರತದ ಬಲವಾದ ಒತ್ತಾಯಗಳ ನಡುವೆಯೂ ಕಾಶ್ಮೀರ ಕಣಿವೆಯಲ್ಲಿ ಪಾಕ್ ಪ್ರಚೋದಿತ ಉಗ್ರರ ಉಪಟಳ ಭೀಕರವಾಗಿದೆ.
ಭಾರತದ ಯೋಧರು ದೇಶವನ್ನು ರಕ್ಷಿಸಲು ಭಯೋತ್ಪಾದಕರೊಂದಿಗೆ ಹೋರಾಡಿ ತಮ್ಮ ಪ್ರಾಣವನ್ನೇ ಸಮರ್ಪಿಸುತ್ತಿದ್ದಾರೆ. ಬುಧವಾರ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಉಗ್ರಗಾಮಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನ್ನಡ ನಾಡಿನ ಮತ್ತೊಬ್ಬ ಯೋಧ ದೇಶಕ್ಕಾಗಿ ಪ್ರಾಣವನ್ನು ತೆತ್ತಿದ್ದಾನೆ.
ಬೆಳಗಾವಿ ತಾಲೂಕಿನ ಅಷ್ಠೇ ಗ್ರಾಮದ ನಿವಾಸಿ ಪುಂಡಲೀಕ ಲಕ್ಷ್ಮಣ ಕಾಕತೀಕರ್ (25) ಕಾಶ್ಮೀರದ ಗಡಿಯಲ್ಲಿ ಬುಧವಾರ ಉಗ್ರಗಾಮಿಗಳೊಂದಿಗೆ ವೀರಾವೇಶದಿಂದ ಹೋರಾಡಿ ಹಲವು ಉಗ್ರರನ್ನು ಕೊಂದು, ತಾವೂ ವೀರಮರಣವನ್ನಪ್ಪಿದ್ದಾರೆ.
ಬೆಳಗಾವಿಯ ಮಿಲಿಟರಿ ಸ್ಕೂಲ್ ವಿದ್ಯಾರ್ಥಿಯಾಗಿದ್ದ ಪುಂಡಲೀಕ ಕಾಕತೀಕರ್ ಅವರು, ಲಕ್ಷ್ಮಣ ಕಾಕತೀಕರ್ ಹಾಗೂ ಪಾರ್ವತಿ ಬಾಯಿ ಅವರ ಜ್ಯೇಷ್ಠ ಪುತ್ರ. ದೇಶ ಸೇವೆ ಮಾಡುವ ಛಲದೊಂದಿಗೆ 5 ವರ್ಷಗಳ ಹಿಂದೆ ಎರಡನೇ ಪ್ಯಾರಾ ಟ್ರೂಪ್ ಮಿಲಿಟರಿ ಪಡೆಯಲ್ಲಿ ಪುಂಡಲೀಕ ಸೈನಿಕನಾಗಿ ಸೇರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...