ಪಾಲುದಾರ ಶೃಂಗಮೇಳ ಆರಂಭ, ಬೆಂಗಳೂರಲ್ಲಿ ಟೋನಿ ಬ್ಲೇರ್
ಬೆಂಗಳೂರು : ಭಾರತದ ಸಿಲಿಕಾನ್ ರಾಜಧಾನಿಯಾದ ಬೆಂಗಳೂರು ಈಚಿನ ವರ್ಷಗಳಲ್ಲಿ ಅಪಾರ ಪ್ರಗತಿ ಸಾಧಿಸಿದೆ ಎಂದು ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಶ್ಲಾಘಿಸಿದ್ದಾರೆ.
ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಶನಿವಾರ ಮಧ್ಯಾಹ್ನ 8 ನೇ ಪಾಲುದಾರ ಶೃಂಗಮೇಳ-2002 ಉದ್ಘಾಟಿಸಿ ಟೋನಿ ಬ್ಲೇರ್ ಮಾತನಾಡುತ್ತಿದ್ದರು. ಬದಲಾಗುತ್ತಿರುವ ಸಂದರ್ಭದಲ್ಲಿ ಕೈಗಾರಿಕೆಯ ಸ್ಥಿತಿಗತಿ ಹಾಗೂ ಆತಂಕಗಳ ಬಗ್ಗೆ ಟೋನಿ ಬ್ಲೇರ್ ಪ್ರಸ್ತಾಪಿಸಿದರು.
ಭಯೋತ್ಪಾದಕತೆಗೆ ಸಮರ್ಥನೆಗಳೇ ಇಲ್ಲ : ಯಾವುದೇ ರಾಜಕೀಯ ಕಾರಣಗಳು ಭಯೋತ್ಪಾದಕತೆಗೆ ಸಮರ್ಥನೆಯಾಗುವುದಿಲ್ಲ . ಭಯೋತ್ಪಾದಕತೆಯಿಂದ ಹೊರತಾದ ವಾತಾವರಣದಲ್ಲಿ ಕಾಶ್ಮೀರ ಸಮಸ್ಯೆಗೆ ಪಾಕಿಸ್ತಾನ ಹಾಗೂ ಭಾರತ ಪರಿಹಾರ ಹುಡುಕಿಕೊಳ್ಳಬೇಕು ಎಂದು ಟೋನಿ ಬ್ಲೇರ್ ಹೇಳಿದರು. ಕಾಶ್ಮೀರ ಸಮಸ್ಯೆಯ ಕುರಿತು ಭಾರತದ ನಿಲುವಿಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ ಬ್ಲೇರ್, ಕಾಶ್ಮೀರದಂಥ ಸಮಸ್ಯೆಗಳಿಗೆ ರಾಜಕೀಯ ಪರಿಹಾರ ಹುಡುಕಿಕೊಳ್ಳಬೇಕೆ ಹೊರತು, ಭಯೋತ್ಪಾದಕತೆ ಪರಿಹಾರವಲ್ಲ . ಯಾವುದೇ ನಾಗರಿಕ ಸಮಾಜದಲ್ಲಿ ಲಷ್ಕರ್-ಇ-ತೊಯಿಬಾ ಅಥವಾ ಜೈಷ್-ಎ-ಮೊಹಮದ್ನಂಥ ಸಂಘಟನೆಗಳಿಗೆ ಅವಕಾಶವಿಲ್ಲ ಎಂದರು.
ಅಭಿವೃದ್ಧಿ ಶೀಲ ರಾಷ್ಟ್ರಗಳು ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಡುವಣ ಉತ್ತಮ ಸಂಬಂಧಕ್ಕೆ ಈ ಮೇಳ ಚಾಲನೆ ನೀಡಲಿದೆ ಎಂದು ಬ್ಲೇರ್ ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಕೇಂದ್ರ ಸಚಿವ ಪ್ರಮೋದ್ ಮಹಾಜನ್ ಹಾಗೂ ಇನ್ಫೋಸಿಸ್ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಹಾಗೂ ದೇಶ ವಿದೇಶಗಳ ವಾಣಿಜ್ಯ ಪ್ರತಿನಿಧಿಗಳು ಮೇಳದಲ್ಲಿ ಹಾಜರಿದ್ದರು.
‘ಪಾಲುಗಾರಿಕೆಯಾಂದಿಗೆ ಪರಮೋಚ್ಛ ಪ್ರಗತಿಯೆಡೆಗೆ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಜನವರಿ 5 ರಿಂದ ಪ್ರಾರಂಭವಾಗಿರುವ ಪಾಲುದಾರ ಶೃಂಗಮೇಳ, ಜನವರಿ 11 ರವರೆಗೆ ನಡೆಯಲಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆಹಾರ ಪರಿಷ್ಕರಣೆ ಉದ್ಯಮ, ದೂರವಾಣಿ, ಔಷಧಿ, ಜವಳಿ ಹಾಗೂ ಉಡುಪು ತಯಾರಿಕೆ, ವಾಹನ ಮತ್ತು ಬಿಡಿ ಭಾಗಗಳ ತಯಾರಿಕೆ, ರಸ್ತೆ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಜಾಗತಿಕ ಬಂಡವಾಳಗಾರರಿಗೆ ಈ ಮೇಳ ಅವಕಾಶಗಳ ಬಾಗಿಲನ್ನು ತೆರೆಯುವುದೆಂದು ನಿರೀಕ್ಷಿಸಲಾಗಿದೆ.
ರಾಜಭವನದಲ್ಲಿ ರಾಜಾತಿಥ್ಯ
ಬ್ರಿಟನ್ ಪ್ರಧಾನಿ ಟೋನಿಬ್ಲೇರ್ ಹಾಗೂ ಅವರ ಪತ್ನಿ ಚೆರ್ರಿ ಸ್ಟೆಪ್ಡ್ ಅವರ ಗೌರವಾರ್ಥ ರಾಜ್ಯಪಾಲೆ ವಿ.ಎಸ್.ರಮಾದೇವಿ ಅವರು ಶುಕ್ರವಾರ ರಾತ್ರಿ ವಿಶೇಷ ಭೋಜನ ಕೂಟ ಏರ್ಪಡಿಸಿದ್ದರು. ದುಂಡು ಕಾಲರ್ನ ರೇಷ್ಮೆಯ ನೆಹರೂ ಜಾಕೆಟ್ ಧರಿಸಿದ್ದ ಬ್ಲೇರ್ ಹಾಗೂ ದುಬಾರಿ ಕಲ್ವಾರ್ ಕಮೀಜ್ ಧರಿಸಿದ್ದ ಚೆರ್ರಿ ಉತ್ಸಾಹದಿಂದ ಭೋಜನಕೂಟದಲ್ಲಿ ಭಾಗವಹಿಸಿದ್ದರು. ಶುಕ್ರವಾರ ಬೆಂಗಳೂರಿಗೆ ಆಗಮಿಸುವುದರೊಂದಿಗೆ ಬ್ಲೇರ್ ದಂಪತಿಗಳ ಆರು ದಿನದ ಉಪಖಂಡ ಪ್ರವಾಸ ಪ್ರಾರಂಭವಾಯಿತು.
(ಏಜೆನ್ಸೀಸ್)
ಮುಖಪುಟ / ಲೋಕೋಭಿನ್ನರುಚಿ