ನಿರುಪಮಾ ರಾವ್ಗೆ ಅತ್ಯುತ್ತಮ ಹೊರನಾಡ ಕನ್ನಡಿತಿ ಪ್ರಶಸ್ತಿ
ಬೆಂಗಳೂರು : ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ, ನಿರುಪಮಾ ರಾವ್ ಅವರು ಅತ್ಯುತ್ತಮ ಹೊರನಾಡ ಕನ್ನಡಿತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ದೆಹಲಿಯಿಂದ ಪ್ರಕಟವಾಗುತ್ತಿರುವ ‘ದೆಹಲಿ ಕನ್ನಡಿಗ ’ ಮಾಸ ಪತ್ರಿಕೆ ಸ್ಥಾಪಿಸಿದ್ದು, ಪ್ರಶಸ್ತಿಯು ತಾಮ್ರ ಫಲಕ ಹಾಗೂ ಬಿನ್ನವತ್ತಳೆಯನ್ನೊಳಗೊಂಡಿದೆ ಎಂದು ಪತ್ರಿಕೆಯ ಸಂಪಾದಕ ಎಂ. ಬಿ. ಸಾಮಗ ಅವರ ಪ್ರಕಟಣೆ ತಿಳಿಸಿದೆ.
ಹಾಗೆಯೇ ಅತ್ಯುತ್ತಮ ದೆಹಲಿ ಕನ್ನಡಿಗ ಪ್ರಶಸ್ತಿಗೆ ಬೆಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಉಪಕುಲಪತಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಕಾರ್ಯದರ್ಶಿ ಪ್ರೊ. ಎನ್. ಆರ್. ಶೆಟ್ಟಿ ಅವರನ್ನು, ಟಿ.ಎ. ಪೈ ಸ್ಮಾರಕ ಅತ್ಯುತ್ತಮ ಬ್ಯಾಂಕರ್ ಪ್ರಶಸ್ತಿಗೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಸ್. ನಾರಾಯಣ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಏಪ್ರಿಲ್ 6ರಂದು ದೆಹಲಿಯಲ್ಲಿ ನಡೆಯುವ 19ನೇ ರಾಷ್ಟ್ರೀಯ ಕನ್ನಡ ಸಮಾವೇಶದಲ್ಲಿ ಪ್ರದಾನ ಮಾಡಲಾಗುವುದು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...