ಬೆರಳಚ್ಚು ಭಾವಚಿತ್ರ ಸಂಗ್ರಹಕ್ಕೆ ಕೊಳೆಗೇರಿನಿವಾಸಿಗಳ ವಿರೋಧ
ಬೆಂಗಳೂರು : ಅಪರಾಧ ನಿಯಂತ್ರಣದ ಹಿನ್ನೆಲೆಯಲ್ಲಿ ನಗರದ ಕೊಳೆಗೇರಿ ನಿವಾಸಿಗಳ ಬೆರಳಚ್ಚು ಹಾಗೂ ಭಾವಚಿತ್ರ ಸಂಗ್ರಹಿಸುವ ನಗರ ಪೊಲೀಸ್ ಆಯುಕ್ತ ಎಚ್. ಟಿ. ಸಾಂಗ್ಲಿಯಾನಾ ಅವರ ಕ್ರಮವನ್ನು ರಾಜ್ಯ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಹಾಗೂ ಪ್ರತಿಪಕ್ಷಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ಬುಧವಾರ ನಗರದಲ್ಲಿ ನಡೆದ ಕೊಳೆಗೇರಿ ನಿವಾಸಿಗಳ ಬೆರಳಚ್ಚು ಮತ್ತು ಭಾವಚಿತ್ರ ಸಂಗ್ರಹ ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಉಳಿದ ಎಲ್ಲ ರಾಜಕೀಯ ಪಕ್ಷದ ನಾಯಕರು ಕೊಳೆಗೇರಿ ನಿವಾಸಿಗಳ ಸಂಘಟನೆಯ ಮುಖಂಡರು ಸಾಂಗ್ಲಿಯಾನಾ ತೆಗೆದುಕೊಂಡಿರುವ ಈ ಕ್ರಮ ಅಮಾನವೀಯವಾದುದು ಎಂದು ಟೀಕಿಸಿದ್ದಾರೆ. ಕೊಳೆಗೇರಿಯಲ್ಲಿರುವವರೆಲ್ಲರನ್ನೂ ಅಪರಾಧಿಗಳು ಅಥವಾ ಭಯೋತ್ಪಾದಕರು ಎಂದು ಅನುಮಾನದಿಂದ ನೋಡುವುದು ಸರಿಯಲ್ಲ. ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದೇ ಪೊಲೀಸರ ಕೆಲಸ. ವಿನಾ ಕಾರಣ ಸಂಶಯದಿಂದ ನೋಡುವುದು ಸರಿಯಲ್ಲ ಎಂದು ಸಲಹೆ ಮಾಡಿದರು.
ಕೊಳಚೆ ಇರುವುದು ಆಡಳಿತದಲ್ಲಿ. ರಾಜೀವ ಗಾಂಧಿ ಅವರ ಕೊಲೆ ಮಾಡಿದ್ದ ಶಿವರಾಸನ್ ಕೊಳೆಗೇರಿಯಲ್ಲಿರಲಿಲ್ಲ. ಭೂಗತ ವ್ಯವಹಾರದಿಂದ ಹಿಡಿದು ಎಲ್ಲಾ ಅಕ್ರಮಗಳು ನಡೆಯುವುದು ದೊಡ್ಡ ದೊಡ್ಡ ಬಂಗಲೆಗಳಲ್ಲಿ ಎಂಬುದನ್ನು ಸಾಂಗ್ಲಿಯಾನಾ ಮೊದಲು ತಿಳಿದುಕೊಳ್ಳಬೇಕು ಎಂದು ಸಂಯುಕ್ತ ಜನತಾ ದಳದ ಮುಖಂಡ ಮತ್ತು ಶಾಸಕ ಪಿ.ಜಿ. ಆರ್ . ಸಿಂಧ್ಯಾ ಹೇಳಿದರು.
ಜಾತ್ಯಾತೀತ ಜನತಾ ದಳದ ಎಚ್. ಸಿ. ಮಹದೇವಪ್ಪ ಮಾತನಾಡಿ ಕೊಳೆಗೇರಿಗಳ ದಾರುಣ ಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳೂ ಹೊಣೆಯಾಗಿವೆ ಎಂದರು. ಕೊಳೆಗೇರಿ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಸಿಪಿಐನ ಮುಖಂಡ ಎಂ. ಸಿ . ವೆಂಕಟರಾಂ ಅಭಿಪ್ರಾಯಪಟ್ಟರು. ಸಭೆಯಲ್ಲಿ ಬಿಜೆಪಿ ಶಾಸಕರಾದ ಎಸ್. ಸುರೇಶ್ ಕುಮಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಿಪಿಐ(ಎಂ)ನ ಪ್ರಕಾಶ್, ಕೊಳೆಗೇರಿ ನಿವಾಸಿಗಳ ಸಂಘಟನೆಯ ಅಧ್ಯಕ್ಷ ಎನ್. ಪಿ. ಸ್ವಾಮಿ ಹಾಗೂ ಕಾರ್ಯದರ್ಶಿ ಡಾ. ರೂತ್ ಮನೋರಮಾ ಭಾಗವಹಿಸಿದ್ದರು.
(ಇನ್ಫೋ ವಾರ್ತೆ
ಮುಖಪುಟ / ಸಾಂಗ್ಲಿಯಾನಾ ವಾಚ್