ರಾಜ್ಯದಲ್ಲಿ ವಿದ್ಯುತ್ ಲೋಡ್ಷೆಡ್ಡಿಂಗ್ ಅನಿವಾರ್ಯ : ಕೃಷ್ಣ ಉವಾಚ
ಬೆಂಗಳೂರು : ಈ ಬಾರಿ ಕರ್ನಾಟಕ ರಾಜ್ಯ ಎದುರಿಸಿದ ಬರಗಾಲದಿಂದಾಗಿ ಜಲಾಶಯಗಳೆಲ್ಲಾ ಬರಿದಾಗಿದ್ದು, ತೀವ್ರ ವಿದ್ಯುತ್ ಕೊರತೆ ತಲೆದೋರಿದೆ. ಮುಂದಿನ ದಿನಗಳಲ್ಲಿ ಇದು ತೀವ್ರ ಸ್ವರೂಪದಲ್ಲಿ ರಾಜ್ಯವನ್ನು ಕಾಡಲಿದೆ ಎಂಬುದು ಸರ್ವವಿಧಿತ ಎಂದು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಲೋಡ್ಷೆಡ್ಡಿಂಗ್ ಜಾರಿ ಮಾಡುವುದು ಅನಿವಾರ್ಯ. ಆದರೆ, ಲೋಡ್ಷೆಡ್ಡಿಂಗನ್ನು ಯಾವಾಗ ಜಾರಿಗೆ ತರಬೇಕು ಎಂಬುದನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿರ್ಧರಿಸಲಿದೆ ಎಂದು ಅವರು ಹೇಳಿದರು.
ದೊಮ್ಮಲೂರಿನಲ್ಲಿರುವ ಟಾಟಾ ವಿದ್ಯುತ್ ಸಂಶೋಧನಾ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ಕೇಂದ್ರದ ಪರಿಸರ ಸ್ನೇಹಿ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ರಾಜ್ಯದ ವಿದ್ಯುತ್ ಕೊರತೆ ನೀಗಿಸಲು, ಹೊರ ರಾಜ್ಯಗಳಿಂದ ಹಾಗೂ ಕೇಂದ್ರ ಗ್ರಿಡ್ನಿಂದ ವಿದ್ಯುತ್ ಖರೀದಿಸಲು ಪ್ರಯತ್ನ ಸಾಗಿದೆ ಎಂದರು.
ವಿದ್ಯುತ್ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆ ಕೊರತೆಯಿಂದ ಬೆಂಗಳೂರಿನ ಸಾಫ್ಟ್ವೇರ್ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳು ಜನರೇಟರ್ಗಳ ಮೊರೆ ಹೋಗುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿನಿತ್ಯ 6 ಗಂಟೆ ವಿದ್ಯುತ್ ಪೂರೈಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ವಿದ್ಯುತ್ ಪ್ರಸರಣ ನಿಗಮಕ್ಕೂ ಸ್ಪಷ್ಟ ಸೂಚನೆ ನೀಡಲಾಗಿದೆ. ಒಟ್ಟಾರೆಯಾಗಿ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣ ಭರವಸೆ ನೀಡಿದರು.
ನಾಲ್ಕು ವರ್ಷಗಳ ಹಿಂದೆ ವಿದ್ಯುತ್ ಪ್ರಸರಣದಲ್ಲಿ ಪ್ರತಿಶತ 18ರಷ್ಟು ನಷ್ಟ ಸಂಭವಿಸುತ್ತಿತ್ತು. ಈಗ ಆ ಪ್ರಮಾಣ ಪ್ರತಿಶತ 38ಕ್ಕೆ ಏರಿದೆ. ಇಷ್ಟು ಅಗಾದ ಪ್ರಮಾಣದ ನಷ್ಟ ಸಂಭವಿಸಲು ಕಾರಣ ಏನು ಎಂಬುದಕ್ಕೆ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷರೇ ಉತ್ತರಿಸಬೇಕು ಎಂದ ಕೃಷ್ಣ ಸಮಾರಂಭದಲ್ಲಿ ಹಾಜರಿದ್ದ ವಿದ್ಯುತ್ ನಿಗಮದ ಅಧ್ಯಕ್ಷರತ್ತ ತಿರುಗಿದಾಗ ಪ್ರೇಕ್ಷಕರ ತುಟಿಗಳಲ್ಲಿ ನಗೆ ಮಿಂಚು ಚಿಮ್ಮಿತು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ