ಕಿತ್ತೂರು ಕೋಮು ಗಲಭೆ : 17 ಜನರ ಬಂಧನ, ನಿಷೇಧಾಜ್ಞೆ
ಬೆಳಗಾವಿ : ಕಾಲೇಜು ವಿದ್ಯಾರ್ಥಿನಿಯರನ್ನು ಮತ್ತೊಂದು ಕೋಮಿಗೆ ಸೇರಿದ ಯುವಕರಿಬ್ಬರು ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರಿನಲ್ಲಿ ಗಲಭೆ, ಲಾಠಿ ಪ್ರಹಾರ ನಡೆದಿದ್ದು, ಪೊಲೀಸರು 17 ಜನರನ್ನು ಬಂಧಿಸಿದ್ದಾರೆ. ಗುರುವಾರದವರೆಗೆ ಕಿತ್ತೂರಿನಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಈ ವಿಷಯವನ್ನು ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕ ಓಂ ಪ್ರಕಾಶ್ ಅವರು ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಿತ್ತೂರು ನಾಡು ಕಾಲೇಜು ಮೈದಾನದಲ್ಲಿ ಮಂಗಳವಾರ ಮಧ್ಯಾಹ್ನ ಹುಡುಗಿಯರನ್ನು ಮತ್ತೊಂದು ಕೋಮಿಗೆ ಸೇರಿದ ಇಬ್ಬರು ಯುವಕರು ಚುಡಾಯಿಸಿದ್ದೇ ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳಲು ಕಾರಣ ಎಂದು ಅವರು ಹೇಳಿದ್ದಾರೆ.
ಘಟನೆ ವಿವರ: ಕಾಲೇಜು ಆವರಣದಲ್ಲಿ ಹುಡುಗಿಯರನ್ನು ಚುಡಾಯಿಸಿದ ಯುವಕನನ್ನು ಪ್ರಶ್ನಿಸಲು ಕಾಲೇಜು ಪ್ರಾಂಶುಪಾಲರ ಕಚೇರಿಗೆ ಕರೆತರಲಾಯಿತು. ಈ ಸುದ್ದಿ ಊರೆಲ್ಲೆಲ್ಲಾ ಹಬ್ಬಿತು. ಯುವಕನ ಕೋಮಿಗೆ ಸೇರಿದ 400-500 ಜನರು ಮಾರಕಾಸ್ತ್ರಗಳಿಂದ ಕಾಲೇಜಿಗೆ ಧಾವಿಸಿದರು. ದಾಂಧಲೆ ಮಾಡಿದರು. ಕಲ್ಲುತೂರಾಟದಲ್ಲಿ ತೊಡಗಿದರು. ಇದರಿಂದ ಕಾಲೇಜು ಕಟ್ಟಡಕ್ಕೆ ಹಾನಿಯುಂಟಾಯಿತು. ಪ್ರಾಂಶುಪಾಲರಿಗೂ ಸಣ್ಣಪುಟ್ಟ ಗಾಯಗಳಾಯಿತು.
ಈ ವಿಷಯ ತಿಳಿದ ಮತ್ತೊಂದು ಕೋಮಿನವರು ಕಾಲೇಜಿನತ್ತ ಧಾವಿಸಿದರು. ಅಷ್ಟೊತ್ತಿಗೆ ಮೊದಲ ಗುಂಪು ಅಲ್ಲಿಂದ ಕಾಲ್ತೆಗೆದಿತ್ತು. ಆದಾಗ್ಯೂ ಕಾಲೇಜು ಆವರಣದಲ್ಲಿ ಸಭೆಸೇರಿದ ಮತ್ತೊಂದು ಗುಂಪಿನವರು, ಊರಿನಲ್ಲಿ ಮೆರವಣಿಗೆ ನಡೆಸಿದರು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಈ ಮಧ್ಯೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಈ ಹೊತ್ತು ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ ಎಂದು ಓಂಪ್ರಕಾಶ್ ಹೇಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ 144ನೇ ಕಲಂ ಅಡಿಯಲ್ಲಿ ಗುರುವಾರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು. ನಗರದಲ್ಲಿ ಬಿಗುವಿನ ವಾತಾವರಣ ಇದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...