ಸರ್ಕಾರಿ ಪ್ರಶಸ್ತಿಗಳಿಗೆ ಕಿಮ್ಮತ್ತು ಕಡಿಮೆ- ಚಂದ್ರಶೇಖರ ಕಂಬಾರ
ಬೆಂಗಳೂರು : ಸರಕಾರಿ ಪ್ರಶಸ್ತಿಗಿಂತ ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳಿಗೇ ಹೆಚ್ಚಿನ ಮೌಲ್ಯ ಇರುತ್ತದೆ ಎಂದು ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.
ಅವರು ಸೋಮವಾರ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ನ ಶಾಶ್ವತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು. ಔದ್ಯಮೀಕರಣ ದಿಂದ ದೇಶಕ್ಕೆ ಒಳ್ಳೆಯದಾಗುವುದಿಲ್ಲ . ಹಿಂದೆ ಕಲೆ ಹಾಗೂ ಉತ್ಪಾದನೆಗಳ ನಡುವೆ ಪರಸ್ಪರ ಸಂಬಂಧ ಇತ್ತು. ಆದರೆ ಈಗ ಹಾಗಿಲ್ಲ . ಔದ್ಯಮೀಕರಣಕ್ಕಾಗಿ ನಾವು ತೆರಬೇಕಾಗಿರುವ ಬೆಲೆ ದೊಡ್ಡ ಪ್ರಮಾಣದ್ದಾಗಿರುತ್ತದೆ ಎಂಬುದನ್ನು ರಾಜಕಾರಣಿಗಳು ಅರಿತುಕೊಳ್ಳಬೇಕು ಎಂದು ಕಂಬಾರರು ಎಚ್ಚರಿಕೆ ನೀಡಿದರು.
ಪ್ರಶಸ್ತಿಗಳನ್ನು ನೀಡುವ ಸರಕಾರಕ್ಕೆ ಹಂಗು, ಮುಲಾಜುಗಳಿರುತ್ತವೆ. ಅದು ಪ್ರಶಸ್ತಿ ನೀಡಿದ ನಂತರ ಶಹಬಾಸ್ಗಿರಿ ನಿರೀಕ್ಷಿಸುತ್ತದೆ. ಆದರೆ ಖಾಸಗಿ ಸಂಸ್ಥೆಗಳು ಪ್ರಶಸ್ತಿಗೆ ಅರ್ಹರನ್ನೇ ಆಯ್ಕೆ ಮಾಡುತ್ತವೆ ಎಂದು ಕಂಬಾರರು ಹೇಳಿದರು. ಇದೇ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶಾಶ್ವತಿ ಪ್ರಶಸ್ತಿ ವಿಜೇತರಿಗೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.
1999ನೇ ಸಾಲಿನ ನಂಜನಗೂಡು ತಿರುಮಲಾಂಬ ಪ್ರಶಸ್ತಿಯನ್ನು ಒರಿಯಾ ಕವಯಿತ್ರಿ ಪ್ರತಿಭಾ ಸತ್ಪತಿಗೆ (‘ ಆದಾ ಆದಾ ನಕ್ಷತ್ರ್’ ಕವನ ಸಂಕಲನ), 2001ನೇ ಸಾಲಿನ ಪ್ರಶಸ್ತಿಯನ್ನು ‘ಭೋಗದಂಡ್’ ಕೊಂಕಣಿ ಕಾದಂಬರಿಗಾಗಿ ಹೇಮಾ ನಾಯಕ್ ಪಡೆದರು.
1999, 2000 ಹಾಗೂ 2001 ನೇ ಸಾಲಿನ ಸಹೋದಿತಾ ಸಾಹಿತ್ಯ ಪ್ರಶಸ್ತಿ ಕ್ರಮವಾಗಿ ವೈದೇಹಿ, ಜ್ಯೋತ್ಸ್ನಾ ಕಾಮತ್ ಮತ್ತು ಗಾಯತ್ರಿ ನಾವಡ ಅವರಿಗೆ ನೀಡಿ ಪುರಸ್ಕರಿಸಲಾಯಿತು. 1999, 2000 ಹಾಗೂ 2001 ಸಾಲಿನ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ ಯನ್ನು ಕ್ರಮವಾಗಿ ಹೇಮಲತಾ ಮಹಿಷಿ , ಸಾಲು ಮರದ ತಿಮ್ಮಕ್ಕ ಮತ್ತು ವಿದ್ಯಾನಾಯಕ್ಗೆ ನೀಡಲಾಯಿತು. ರತ್ನ ಸ್ವಾಮಿ ರಾವ್, ಇಂದುಮತಿ ರಾವ್ ಹಾಗೂ ಸುಶೀಲಾ ಪಿ. ಉಪಾಧ್ಯಾಯ ಅವರಿಗೆ ಗಾರ್ಗಿ ಪುರಸ್ಕಾರ ನೀಡಿ ಗೌರವಿಸಲಾಯಿತು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...