ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಹಿತಿ ತಂತ್ರಜ್ಞಾನ : ಮೊದಲ ರ್ಯಾಂಕ್‌ ಕರ್ನಾಟಕಕ್ಕಲ್ಲದೆ ಇನ್ನಾರಿಗೆ?

By Staff
|
Google Oneindia Kannada News

*ಎಸ್ಕೆ.ಶಾಮಸುಂದರ, ಡಿ.ರಾಮ್‌ರಾಜ್‌

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವನ್ನು ಆಂಧ್ರಪ್ರದೇಶ ಹಿಂದೂಡುವುದು ಬಲು ಕಷ್ಟ. ಸರ್ಕಾರದ ಕೆಲವು ನಿರ್ಣಯಗಳು ಅಥವಾ ಒಂದೆರಡು ವಾರದ ಅವಧಿಯಲ್ಲಿ ಒಂದು ರಾಜ್ಯ ಇನ್ನೊಂದು ರಾಜ್ಯವನ್ನು ಹಿಂದೆ ತಳ್ಳುವುದು ಅಸಾಧ್ಯ. ಬೆಳವಣಿಗೆ ನಿರಂತರ ಪ್ರಕ್ರಿಯೆ. ನಾವು 15 ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇವೆ. ಒಂದು ಬಹಳ ಮುಖ್ಯವಾದ ವಿಷಯವೆಂದರೆ- ಕಳೆದ 12 ತಿಂಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಮೋಡ ಕವಿದಿದ್ದರೂ, ಕರ್ನಾಟಕದಲ್ಲಿನ ಸಾಫ್ಟ್‌ವೇರ್‌ ರಫ್ತು ಕಂಪನಿಗಳು 20 ರಿಂದ 25 ಪ್ರತಿಶತ ಬೆಳವಣಿಗೆಯನ್ನು ಸಾಧಿಸುತ್ತಿವೆ. ಇದು ಹೈದರಾಬಾದ್‌ನಲ್ಲಿ ಸಾಧ್ಯವಾಗುತ್ತಿಲ್ಲ ಎಂದು ರಾಜ್ಯದ ಐಟಿ ಹೆಗ್ಗಳಿಕೆಯನ್ನು ಬಿಕೆಸಿ ಹೆಮ್ಮೆಯಿಂದ ಹೇಳಿಕೊಂಡರು.

ಆರ್ಥಿಕ ಹಿನ್ನಡೆ ರಾಜ್ಯದ ಸಾಫ್ಟ್‌ವೇರ್‌ ಕ್ಷೇತ್ರದ ಮೇಲೆ ತೀರಾ ಕೆಟ್ಟ ಪರಿಣಾಮವನ್ನೇನೂ ಬೀರಿಲ್ಲ ಎನ್ನುವುದು ಸಚಿವರ ಅಭಿಪ್ರಾಯ. ಅವರು ಹೇಳುವಂತೆ: ಹಿಂಜರಿತದಿಂದಾಗಿ ಐಟಿ ಕ್ಷೇತ್ರದ ಮಂದಿ ಹೊಸ ಆದಾಯ ಮೂಲಗಳ ಅನ್ವೇಷಣೆಯಲ್ಲಿದ್ದಾರೆ. ಯುರೋಪ್‌, ಆಸ್ಟ್ರೇಲಿಯಾ, ಮಲೇಷಿಯಾ, ಆಗ್ನೇಯ ಏಷ್ಯಾ ಹಾಗೂ ಇನ್ನಿತರೆ ಹೊಸ ರಾಷ್ಟ್ರಗಳ ಮಾರುಕಟ್ಟೆ ಪ್ರವೇಶಿಸುವ ಪ್ರಯತ್ನಗಳು ನಡೆಯುತ್ತಿವೆ.

ಕಳೆದ 12 ರಿಂದ 14 ತಿಂಗಳಲ್ಲಿ 161 ಕಂಪನಿಗಳು ಬೆಂಗಳೂರಿಗೆ ಬಂದು ವಹಿವಾಟು ಪ್ರಾರಂಭಿಸಿವೆ. ಸಿಸ್ಕೋ ತನ್ನ ವಹಿವಾಟು ವ್ಯಾಪ್ತಿ ವಿಸ್ತರಿಸಲು ಉದ್ದೇಶಿಸಿದೆ. ಅವರ ಬಳಿ 600 ಕೋಟಿ ರುಪಾಯಿ ಯೋಜನೆಯಿದೆ. ಇನ್ನೂ ಮೂರ್ನಾಲ್ಕು ಕಂಪನಿಗಳು ತಮ್ಮ ವ್ಯಾಪಾರ ವಿಸ್ತರಣೆ ಮಾಡುವ ಪ್ರಯತ್ನದಲ್ಲಿವೆ.

ನಾವೀಗ ಮಾಹಿತಿ ತಂತ್ರಜ್ಞಾನದ ಎರಡನೇ ಮಜಲನ್ನು ಮುಟ್ಟಿದ್ದೇವೆ ಎಂದು ನಾನು ಭಾವಿಸಿದ್ದೇನೆ. ಈವರೆಗೆ ಸಾಫ್ಟ್‌ವೇರ್‌ನಲ್ಲಿ ಕೇಂದ್ರೀಕೃತವಾಗಿದ್ದ ಮಾಹಿತಿ ತಂತ್ರಜ್ಞಾನ ತನ್ನ ಗಮನವನ್ನು ಇತರೆ ಕೈಗಾರಿಕೆಗಳತ್ತಲೂ ಹರಿಸುತ್ತಿದೆ. ಇದರಿಂದ ಉತ್ಪನ್ನದ ಹೆಚ್ಚಳ ಹಾಗೂ ಗುಣಮಟ್ಟ ಸಾಧ್ಯವಾಗುತ್ತದೆ.

ಕೆಲಸ ನೀಡುವುದು ಸಾಧ್ಯವಿಲ್ಲ

ಐಟಿ ಹಿನ್ನಡೆಯಿಂದ ಕೆಲಸ ಕಳಕೊಂಡಿರುವ ಕನ್ನಡಿಗರ ಬಗ್ಗೆ ಸರ್ಕಾರಕ್ಕೆ ಕಳಕಳಿಯಿದೆ. ಆದರೆ, ಅವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದಿಂದ ಸಾಧ್ಯವಿಲ್ಲ . ಇವರಿಗೆಲ್ಲ ಕೆಲಸ ಒದಗಿಸಬೇಕೆಂದರೆ ಎರಡು ರಾಜ್ಯ ಸರ್ಕಾರಗಳ ಬಜೆಟ್‌ನಷ್ಟು ಮೊತ್ತ ಬೇಕಾಗುತ್ತದೆ. ಈ ಕೆಲಸ ಕೇಂದ್ರ ಸರ್ಕಾರದಿಂದಲೂ ಸಾಧ್ಯವಿಲ್ಲ ಎಂದು ಚಂದ್ರಶೇಖರ್‌ ಸ್ಪಷ್ಟಪಡಿಸಿದರು.

ಇ-ಆಡಳಿತ ಅನುಷ್ಠಾನ ವಿಳಂಬ: ಸಚಿವರಿಗೆ ಅತೃಪ್ತಿ

ಇ- ಆಡಳಿತ ಅನುಷ್ಠಾನ ಯೋಜನೆ ಪ್ರಗತಿಯ ಬಗೆಗೆ ನನಗೆ ತೃಪ್ತಿಯಿಲ್ಲ . ಐಟಿ ಸೆಕ್ರಟರಿ, ಐಟಿ ನಿರ್ದೇಶಕರು, ಮುಖ್ಯ ಕಾರ್ಯದರ್ಶಿ, ಆರ್ಥಿಕ ಆಯುಕ್ತರು ಹಾಗೂ ಡಿಪಿಎಆರ್‌ ಕಾರ್ಯದರ್ಶಿಗಳ ಸಭೆ ಕರೆದು, ಇ-ಆಡಳಿತ ಜಾರಿ ಯೋಜನೆಯನ್ನು ಚುರುಕುಗೊಳಿಸಲಾಗುವುದು. ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಚರ್ಚಿಸಲಾಗುವುದು.

ಆರೋಗ್ಯ ಸಚಿವ ಡಾ.ಮಲಕರೆಡ್ಡಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಜಿ. ಪರಮೇಶ್ವರ್‌ ಅವರೊಂದಿಗೆ ಮಾತುಕತೆ ನಡೆಸಿದ್ದು , ಅವರ ಖಾತೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಂಪ್ಯೂಟರ್‌ ಅಳವಡಿಕೆ ಕುರಿತ ಮಾಹಿತಿ ನೀಡುವಂತೆ ಕೋರಿದ್ದೇನೆ. ಯಾವ ಇಲಾಖೆಗಳಲ್ಲಿ ಕಂಪ್ಯೂಟರೀಕರಣ ಎಷ್ಟೆಷ್ಟು ನಡೆದಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ . ಈ ಕುರಿತು ಸಂಪರ್ಕ ಕಂದರಗಳನ್ನು ನಿವಾರಿಸಲಾಗುವುದು. ಎರಡು ವಾರಗಳಲ್ಲಿ ವರದಿ ಕೊಡುವುದಾಗಿ ತಿಳಿಸಿದ್ದ ಜಿವಿಕೆ ರಾವ್‌ ಆಯೋಗ ಸುಮಾರು ಒಂದು ತಿಂಗಳಾದರೂ ವರದಿ ನೀಡಿಲ್ಲ ಎಂದು ಆಡಳಿತಯಂತ್ರದ ನಿಧಾನ ಗತಿಗೆ ಇನ್ನೊಂದು ಕನ್ನಡಿ ಹಿಡಿದರು ಬಿಕೆಸಿ.

ಮಾಹಿತಿ ತಂತ್ರಜ್ಞಾನ ಕುರಿತು ಬಿ.ಕೆ.ಸಿ ತಮ್ಮ ಯೋಜನೆಗಳನ್ನು , ಚಿಂತನೆಗಳನ್ನು ಹೇಳತೊಡಗಿದಂತೆ ನಮ್ಮ ಕಣ್ಣೆದುರು ಸುಳಿದದ್ದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ . ವಾರ್ತಾ ಇಲಾಖೆಯಿಂದ ಮಾಹಿತಿ ತಂತ್ರಜ್ಞಾನ ಇಲಾಖೆಗೆ ಚಂದ್ರಶೇಖರ್‌ ಅವರನ್ನು ಮುಖ್ಯಮಂತ್ರಿ ಬದಲಿಸಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ದೊರಕಿತ್ತು . ಪ್ರಾಮಾಣಿಕತೆ, ದಕ್ಷತೆ, ನಿಷ್ಠುರತೆ ಹಾಗೂ ಮಹತ್ವಾಕಾಂಕ್ಷೆ .. ಇನ್ನೇನು ಬೇಕು ಸಿಲಿಕಾನ್‌ ವ್ಯಾಲಿಯ ಅಭ್ಯುದಯಕ್ಕೆ!

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X