ಬೆಂಗಳೂರೆಲ್ಲಾ ಬಡಾವಣೆಯಾದರೆ, ಕಸ ಸುರಿಯಲು ಸ್ಥಳವೆಲ್ಲಿ ?
ಬೆಂಗಳೂರು : ಬೆಂಗಳೂರು ನಗರದಲ್ಲಿ ಹೊಸ ವರ್ಷದ ಮೊದಲ ದಿನವೇ ಹೊಸದೊಂದು ರೀತಿಯ ಸಮಸ್ಯೆ ಉದ್ಭವಿಸಿದೆ. ಬೆಂಗಳೂರೆಲ್ಲಾ ಬಡಾವಣೆಗಳಾಗಿರುವಾಗ ಕಸ ಸುರಿಯಲು ಸ್ಥಳವೆಲ್ಲಿ? ಎಂಬ ಪ್ರಶ್ನೆ ಬೃಹದಾಕಾರವಾಗಿ ಕಾಡಿದೆ. ಈ ಪ್ರಶ್ನೆಗೆ ಉತ್ತರ ದೊರಕದೆ ಕಸ ತುಂಬಿದ 150 ಲಾರಿಗಳು ಸೋಮವಾರ ಮಧ್ಯಾಹ್ನದಿಂದಲೇ ನಿಂತಲ್ಲೇ ನಿಂತು ನಗರದಲ್ಲಿ ದುರ್ನಾತ ಬೀರುತ್ತಿವೆ.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾದ ಕಸವನ್ನು ಲಾರಿಗಳಲ್ಲಿ ನಗರದ ಹೊರವಲಯಕ್ಕೆ ಸಾಗಿಸಲಾಗುತ್ತದೆ. ಆದರೆ, ಹೊರವಲಯದಲ್ಲಿರುವ ಗ್ರಾಮಸ್ಥರು ಕಸದ ದುರ್ನಾತ, ಸೊಳ್ಳೆ ಹಾಗೂ ನೊಣಗಳ ಕಾಟ ತಾಳಲಾರದೆ, ತಮ್ಮ ಪ್ರದೇಶದಲ್ಲಿ ಕಸ ಸುರಿಯುವುದನ್ನು ಪ್ರತಿಭಟಿಸಿದರು. ಕೆಲವು ಚಾಲಕರಿಗೆ ಹಿಡಿದು ಹೊಡೆದರು.
ಜನಗಳ ಪ್ರತಿಭಟನೆಗೆ ಹೆದರಿದ ಕಸ ತುಂಬುವ ಲಾರಿ ಮಾಲಿಕರು, ಈಗ ತಮ್ಮ ಲಾರಿಗಳನ್ನು ಎಲ್ಲಿವೆಯೋ ಅಲ್ಲೇ ನಿಲ್ಲಿಸಿ ಬಿಟ್ಟಿದ್ದಾರೆ. ಕೋರಮಂಗಲ ರಿಂಗ್ ರಸ್ತೆಯಲ್ಲಿ 49, ಜಯನಗರ 4ನೇ ಬ್ಲಾಕಿನಲ್ಲಿ 60 ಹಾಗೂ ರಾಜಾಜಿನಗರ ವಲಯದ 41 ಕಸತುಂಬಿದ ಲಾರಿಗಳು ಮಲ್ಲೇಶ್ವರ ನಗರ ಪಾಲಿಕೆ ವಾರ್ಡ್ ಕಚೇರಿ ಎಂದುರು ನಿಂತು ದುರ್ನಾತ ಬೀರುತ್ತಿವೆ.
ಸ್ವಾಮಿ, ಮೇಯರ್ ಸಾಹೇಬ್ರು ಅಥವಾ ಪಾಲಿಕೆ ಅಧಿಕಾರಿಗಳು ನಮಗೆ ಕಸ ಸುರಿಯಲು ಜಾಗ ತೋರಿಸ್ಲಿ, ನಾವು ಅಲ್ಲಿ ಕಸ ಸುರೀತೀವಿ, ಅವರು ಪ್ರಾಬ್ಲಂ ಸಾಲ್ವ್ ಮಾಡ್ದೇ ಇದ್ರೆ ಲಾರಿಗಳು ಹಾಗೇ ನಿಂತಿರುತ್ತವೆ ಅಂತಾರೆ ಲಾರಿ ಚಾಲಕರು ಮತ್ತು ಕೆಲಸಗಾರರು.
ಕಸ ಹಾಕಲೆಂದೇ ನಗರದ ಹೊರವಲಯದಲ್ಲಿ ಜಾಗವಿದೆ ಎಂದು ಪಾಲಿಕೆ ಹೇಳುತ್ತದಾದರೂ, ಈವರೆಗೆ ನಿಖರವಾದ ಜಾಗ ತೋರಿಸಿಲ್ಲ. ಈ ಬಗ್ಗೆ ಬೆಂಗಳೂರು ಕಸ ನಿರ್ವಹಣೆಯ ಗುತ್ತಿಗೆ ಪಡೆದ ಗುತ್ತಿಗೆದಾರರು ಪಾಲಿಕೆ ಆಯುಕ್ತರಿಗೆ ಲಿಖಿತ ಮನವಿಯನ್ನೂ ಸಲ್ಲಿಸಿದ್ದಾರೆ. ಕಸ ಹಾಕಲು ಜಾಗ ತೋರಿಸಿ ಎಂದು ಕೋರಿದ್ದಾರೆ. ಈ ಇಬ್ಬರ ತಿಕ್ಕಾಟದಲ್ಲಿ ಬೆಂಗಳೂರಿಗರು ಮೂಗು ಮುಚ್ಚಿಕೊಂಡು ನಡೆಯುತ್ತಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...