ಕಾಶ್ಮೀರ ಈಸ್ ನಾಟ್ ನೆಗೋಷಿಯಬಲ್: ವಾಜಪೇಯಿ
ನ್ಯೂಯಾರ್ಕ್: ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷ್ರಫ್ ಅವರು, ಕಾಶ್ಮೀರ ವಿಷಯವನ್ನು ಏಕಂಶದ ಕಾರ್ಯಕ್ರಮ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಪ್ರಧಾನಿ ವಾಜಪೇಯಿ ಅವರು, ಕಾಶ್ಮೀರ ವಿಷಯದಲ್ಲಿ ಯಾವುದೇ ರಾಜಿಗೆ ಭಾರತ ಸಿದ್ಧವಿಲ್ಲ ಎಂದು ಘೋಷಿಸಿದ್ದಾರೆ.
ನಮ್ಮ ನೆರೆ ರಾಷ್ಟ್ರ ಕಾಶ್ಮೀರ ವಿಷಯದಲ್ಲಿ ತಪ್ಪುಹೆಜ್ಜೆ ಇಟ್ಟರೆ, ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಪ್ರಧಾನಿ ಎಚ್ಚರಿಕೆ ನೀಡಿದರು. ಪಾಕ್ ಅಧ್ಯಕ್ಷ ಮುಷ್ರಫ್ ತಲೆಯಲ್ಲಿ ಕಾಶ್ಮೀರವನ್ನು ಕಬಳಿಸುವುದು ಹೇಗೆ ಎಂಬ ಒಂದೇ ಒಂದು ವಿಷಯ ತುಂಬಿದೆ. ಆದರೆ, ಅವರಿಗೆ ಕಾಶ್ಮೀರ ದಕ್ಕಲು ಸಾಧ್ಯವೇ ಇಲ್ಲ ಎಂದರು.
ಕಾಶ್ಮೀರ ಭಾರತದ ಕಿರೀಟವಿದ್ದಂತೆ, ಅದು ನಮ್ಮ ದೇಶದ ಅವಿಭಾಜ್ಯ ಅಂಗ. ಅದನ್ನು ಕಬಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಗಡಿಯಾಚೆಯ ಅಂತಹ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸಲು ಭಾರತ ಸಮರ್ಥವಾಗಿದೆ ಎಂದು ನ್ಯೂಯಾರ್ಕ್ನಲ್ಲಿ ಭಾರತೀಯ ಅಮೆರಿಕನ್ನರ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.
ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಕಾಶ್ಮೀರ ವಿಷಯವನ್ನು ಪರ್ವೇಜ್ ಮುಷ್ರಫ್ ಪ್ರಸ್ತಾಪಿಸಿದ ಕೆಲವೇ ಗಂಟೆಗಳಲ್ಲಿ ವಾಜಪೇಯಿ ಅವರು ಈ ಪ್ರತಿಕ್ರಿಯೆ ನೀಡಿದರು. ಭಯೋತ್ಪಾದನೆಯಿಂದ ಪಾಕಿಸ್ತಾನ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.
ಈ ಮಧ್ಯೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಭಾರತ ಹಾಗೂ ಪಾಕಿಸ್ತಾನಗಳೆರಡನ್ನೂ ಸಂಧಾನದ ವೇದಿಕೆಗೆ ಕರೆತರಲು ಅಮೆರಿಕ ಸರ್ವಪ್ರಯತ್ನ ಮಾಡುವುದು ಎಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ತಿಳಿಸಿದ್ದಾರೆ.
(ಪಿ.ಟಿ.ಐ)